ಹಿಂದೂ ಮತಾಂಧ ಶಕ್ತಿಗಳು ಅಂತರ್ಜಾತೀಯ ವಿವಾಹಿತರು ಹಾಗೂ ಅಂತರ್ಧಮೀಯ ಯುವಕ ಯುವತಿಯರು ಒಂದೆಡೆ ಸೇರುತ್ತಿರುವುದನ್ನು ವಿರೋಧಿಸಿ ಧಾಳಿ ನಡೆಸುತ್ತಿರುವುದು ಮತ್ತು ಕಗ್ಗೊಲೆಗೆ ಮುಂದಾಗುತ್ತಿರುವುದನ್ನು ರಾಜ್ಯದ ಮುಖ್ಯಮಂತ್ರಿ ಬಲವಾಗಿ ಖಂಡಿಸಿ, ಕಾನೂನಾತ್ಮಕ ಕ್ರಮಹಿಸುವ ಬದಲು ಕ್ರಿಯೆಗೆ ಪ್ರತಿಕ್ರಿಯೆ ಮತ್ತು ಭಾವನಾತ್ಮಕ ವಿಚಾರವಾಗಿದೆಯೆಂದು ಬಹಿರಂಗವಾಗಿ ಸಮರ್ಥಿಸುತ್ತಿರುವುದು ತೀವ್ರ ಖಂಡನೀಯವಾಗಿದೆ. ಅವರ ಈ ಬಹಿರಂಗ ಹೇಳಿಕೆಗಳು ಭಾರತದ ಸಂವಿಧಾನದ ವಿರೋಧಿ ಹೇಳಿಕೆಗಳಾಗಿವೆ.
ಈ ಕೂಡಲೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ರಾಜ್ಯ ಪಾಲರನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಬಲವಾಗಿ ಒತ್ತಾಯಿಸುತ್ತದೆ. ಇದೇ ಮುಖ್ಯಮಂತ್ರಿಗಳು ರೈತ ವಿರೋಧಿಯಾದ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರನ್ನು ನಕಲಿ ರೈತರೆಂದು ಜರೆಯುವ ಉದ್ಧಟತನವನ್ನು ಮೆರೆದಿದ್ದರು.
ಮುಖ್ಯಮಂತ್ರಿ ಗಳ ಇಂತಹ ಸಂವಿದಾನ ವಿರೋಧಿ ಮತ್ತು ಕೋಮು ಹಾಗೂ ಜಾತಿ ದ್ವೇಷದ ಪರವಾದ ಹೇಳಿಕೆಯಿಂದ ಉತ್ತೇಜಿತರಾದ ಹಿಂದೂ ಮತಾಂಧರು ಯುವಜನರಿಗೆ ಸ್ವ ರಕ್ಷಣೆಯ ಹೆಸರಿನಲ್ಲಿ ತಲವಾರುಗಳನ್ನು ಹಂಚಲು ಮುಂದಾದ ದುಷ್ಕೃತ್ಯವು ನಡೆದಿದೆ.
ವಿಜಯದಶಮಿ ದಿನದಂದು ಕಾನೂನು ಹಾಗು ಸುವ್ಯವಸ್ಥೆಯನ್ನು ಕಾಪಾಡ ಬೇಕಾದ ಪೋಲೀಸ್ ಠಾಣೆಗಳು, ಪೊಲೀಸರು ಕೇಸರಿ ಶಾಲುಗಳನ್ನು ಸಾಮೂಹಿಕವಾಗಿ ಹೊದ್ದು ಜಿಲ್ಲೆಯ ಉನ್ನತ ಪೋಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಫೋಟೋ ತೆಗೆಸಿಕೊಂಡು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಹಿಂದೂ ಮತಾಂಧತೆ ಪೋಲೀಸ್ ಇಲಾಖೆಯಲ್ಲಿ ನುಸುಳಿರುವುದನ್ನು ತೋರಿಸುತ್ತದೆ ಆ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಇಲಾಖೆ ಅದರ ವಿರುದ್ದ ಮುಖ ಮಾಡಿರುವುದನ್ನು ತೋರುತ್ತಿದೆ. ಇದೊಂದು ಗಂಭೀರ ಅಪಾಯಕಾರಿ ಬೆಳವಣಿಗೆಯಾಗಿದೆ
ಈ ಎಲ್ಲ ಪ್ರಕರಣಗಳನ್ನು ಉಚ್ಚ ನ್ಯಾಯಾಲಯದ ಸುಪರ್ಧಿಯಲ್ಲಿ ನ್ಯಾಯಾಂಗ ತನಿಖೆಗೊಳಪಡಿಸಿ
ಸಂವಿಧಾನ ರಕ್ಷಣೆಗೆ ಮತ್ತು ಕಾನೂನು ಸುವ್ಯವಸ್ಥೆಯ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ.