ಬೆಂಗಳೂರು, ಅ 19-: ಈ ತಿಂಗಳ 30 ರಂದು ಈದ್-ಮಿಲಾದ್ ಚರಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈದ್ ಮಿಲಾದ್ ಆಚರಿಸುವವರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.
ಕೊರೊನಾ ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಸಾಮೂಹಿಕ ಮೆರವಣಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಒಂದೆಡೆ ಸೇರುವುದಕ್ಕೆ ಅವಕಾಶ ನಿರಾಕರಿಸಿದೆ.
ಈದ್ ಮಿಲಾದ್ ದಿನದಂದು ನಡೆಯುವ ಯಾವುದೇ ರೀತಿಯ ಹಗಲು ಅಥವಾ ರಾತ್ರಿಯ ಧಾರ್ಮಿಕ ಕಾರ್ಯಕ್ರಮ, ಸಭೆಗಳನ್ನೂ ಸಹ ಕಡ್ಡಾಯವಾಗಿ ನಿಷೇಧಿಸಿದೆ. 60 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.
ಪ್ರಾರ್ಥನಾ ಮಂದಿರದಲ್ಲಿ ಸ್ಯಾನಿಟೈಸ್ ಹಾಗೂ ಸೋಪಿನಿಂದ ಕೈ ತೊಳೆಯಲು ಪ್ರವೇಶ ದ್ವಾರದಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕಡ್ಡಾಯವಾಗಿ ಎಲ್ಲರೂ 6 ಅಡಿ ಅಂತರದ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಹೇಳಿದೆ.