ಶಾಸಕರ ವಿರುದ್ಧ ಜಾತಿ ರಾಜಕೀಯ ಆರೋಪ ಸಲ್ಲದು; ಬಿಜೆಪಿ ಪುರಸಭೆ ಸದಸ್ಯ ನಾಗರಾಜ ಗೋಗಿ.

0
189

ದೇವದುರ್ಗ.ಅ.೧೯-ಶಾಸಕ ಕೆ.ಶಿವನಗೌಡ ನಾಯಕ ಎಲ್ಲ ಜಾತಿಗಳನ್ನು ಸಮಾನವಾಗಿ ನೋಡುತ್ತಿದ್ದು, ಬೇಧಭಾವ ಮಾಡುವುದಿಲ್ಲ. ಆದರೆ, ವಿರೋಧ ಪಕ್ಷದ ಮುಖಂಡರು ಅವರ ವಿರುದ್ಧ ಜಾತಿ ರಾಜಕೀಯ ಆರೋಪ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ಪುರಸಭೆ ಸದಸ್ಯ ನಾಗರಾಜ ಗೋಗಿ ಹೇಳಿದರು.
ಕೆ.ಶಿವನಗೌಡ ನಾಯಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ತಂದು ವೇಗದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಪ್ರತಿಯೊಂದು ಹಳ್ಳಿಗೆ ರಸ್ತೆ, ಕುಡಿವ ನೀರು, ಸಿಸಿ ರಸ್ತೆ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಅವರು ಯಾವುದೇ ಬೇಧಭಾವ ಮಾಡಿಲ್ಲ. ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಪುರಸಭೆಯಲ್ಲಿ ಗೆದ್ದುಬೀಗಿದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಶಾಸಕರ ಏಳಿಗೆ ಸಹಿಸದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ ಎಲ್ಲರ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿದ್ದಾರೆ. ಯಾವುದೇ ಒಂದು ಜಾತಿ ಎತ್ತಿಹಿಡಿಯದೆ, ಇನ್ನೊಂದು ಜಾತಿ ಕೈಬಿಡದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದಾರೆ. ಬಿಜೆಪಿ ವಿವಿಧ ಘಟಕ ಸೇರಿ ಅಧಿಕಾರದಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕರು ಇಲ್ಲಸಲ್ಲದ ಆರೋಪ ಮಾಡುವ ಬದಲು ಆರೋಗ್ಯಕರ ಟೀಕೆ ಮಾಡುವುದು ಕಲಿಯಬೇಕು. ತಾಲೂಕಿನ ಅಭಿವೃದ್ಧಿಗೆ ಶಾಸಕರೊಂದಿಗೆ ಕೈಜೋಡಿಸಬೇಕು. ಜಾತಿ ಜಾತಿಗಳ ನಡುವೆ ಜಗಳ ಅಚ್ಚುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here