ಶಿವಮೊಗ್ಗ,ಮಾ.3- ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದ್ದ ಬೆನ್ನಲ್ಲೇ ಇದಕ್ಕೆ ಇದಕ್ಕೆ ಪೂರಕವಾಗಿ ಜಿಲ್ಲಾ ಪಂಚಾಯ್ತಿ ಚುನಾವಣೆಯ ಒಳಗೆ ದೃಢ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ನಿಮಿತ್ತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ದಿನದಿಂದಲೇ ಬದಲಾವಣೆಯಾಗಲಿದೆ. ಶಿವಮೊಗ್ಗದಲ್ಲಿಯೇ ಆ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಹುಟ್ಟುಹಬ್ಬದ ವೇಳೆ ಕಾಂಗ್ರೆಸ್ ನಾಯಕರೇ ಶುಭ ಕೋರಲು ಆಗಮಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಕಾಂಗ್ರೆಸ್ ಸೇರುತ್ತೀರಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಹುಟ್ಟುಹಬ್ಬದ ದಿನದಂದು ನಾನು ಸುಳ್ಳು ಹೇಳುವುದಿಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆಯ ಒಳಗೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಪುನರುಚ್ಚಿರಿಸಿದ್ದಾರೆ.
ಜೆಡಿಎಸ್ ಬಿಡ್ತೀರಾ ಅನ್ನೋ ಪ್ರಶ್ನೆಗೆ ನಾನು ಇನ್ನೂ ಜೆಡಿಎಸ್ನಲ್ಲೇ ಇದ್ದೇನೆ. ಪಕ್ಷದಲ್ಲಿ ಕೆಲ ಗೊಂದಲಗಳು ಇವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಣ್ಣವರೇ ನನ್ನನ್ನು ಬೆಳೆಸಿದವರು. ರಾಜ್ಯಾದ್ಯಂತ ಪಕ್ಷಕ್ಕಾಗಿ ಓಡಾಡುವಂತೆ ಮಾಡಿದ್ದಾರೆ. ಇದುವರೆಗೂ ಅವರ ಬಳಿ ಯಾವ ಚರ್ಚೆನೂ ಮಾಡಿಲ್ಲ. ಚರ್ಚೆ ಮಾಡಿ, ಹಿತೈಷಿಗಳು, ಕಾರ್ಯಕರ್ತರು ಏನು ಹೇಳುತ್ತಾರೋ ಅದರ ಆಧಾರದ ಮೇಲೆ ಶೀಘ್ರದಲ್ಲಿಯೇ ದೃಢ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆ ಬಂದಾಗ ಪಕ್ಷ ಬದಲಾವಣೆ ಮಾಡೋದು ತಪ್ಪು, ಅದಕ್ಕೂ ಮುಂಚೆಯೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಹೊಸ ಸುಳಿವನ್ನು ಮಧುಬಂಗಾಪ್ಪ ನೀಡಿದ್ದಾರೆ. ಮಾರ್ಚ್ 20ರಿಂದ ರೈತ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ. ಈ ಹಿಂದೆಯೂ ರೈತರಿಗಾಗಿ ಹೋರಾಟ ಮಾಡಿದ್ದೇನೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.