ಸಿಂಧನೂರು,ಮಾ,31-: ಸ್ಥಳೀಯ ಬಸವೇಶ್ವರ ಸಹಕಾರಿಯಿಂದ ಕೊರೊನಾ ಮಹಾಮಾರಿ ತಡೆಗಟ್ಟಲು ಹಾಗೂ ವೈದ್ಯರಿಗೆ ಅನುಕೂಲ ಕಲ್ಪಿಸಲು 7 ಲಕ್ಷ 8 ಸಾವಿರ ವೆಚ್ಚದ 500 ವೈದ್ಯರ ಸ್ವರಕ್ಷಣಾ ಕವಚಗಳುಳ್ಳ ಕಿಟ್ಗಳನ್ನು ತಾಲ್ಲೂಕಾಡಳಿತದ ಮೂಲಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಂಗಳವಾರ ವಿತರಣೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಬಸವೇಶ್ವರ ಸಹಕಾರಿಯೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ನೇಪಾಳ ಭೂಕಂಪಾ, ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಗಳು, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ, ಕೊಡಗು ಪ್ರಕೃತಿ ವಿಕೋಪಕ್ಕೆ ಧನ ಸಹಾಯ, ಸಿದ್ದೇಶ್ವರ ಸ್ವಾಮೀಜಿಗಳ ಧನ ಸಹಾಯ, ಉತ್ತರ ಕರ್ನಾಟಕ ವಿಕೋಪಕ್ಕೆ ಧನಸಹಾಯ, ತುಂಗಭದ್ರಾ ನೀರಾವರಿ ವಿಚಾರವಾಗಿ ರೈತರ ಹೋರಾಟಕ್ಕೆ ಧನ ಸಹಾಯ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಲಾಗಿದೆ. ಈಗ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸಹಕಾರಿಯಾಗಲು ಸಿಂಧನೂರಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ 200 ಕಿಟ್ ಹಾಗೂ ಜಿಲ್ಲಾಡಳಿತಕ್ಕೆ 300ಕಿಟ್ ನೀಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ವೈದ್ಯರಾದ ಡಾ. ನಾಗರಾಜ ಕಾಟ್ವಾ, ಡಾ.ಮಂಜುನಾಥ, ಸಹಕಾರಿಯ ನಿರ್ದೇಶಕರಾದ ರುದ್ರಗೌಡ, ಸಿದ್ರಾಮಪ್ಪ ಸಾಹುಕಾರ ಸೇರಿದಂತೆ ಅನೇಕರು ಇದ್ದರು.