ಬೆಂಗಳೂರು: ಸಂವಿಧಾನವನ್ನು ಒಪ್ಪುವ ಓರ್ವ ಭಾರತೀಯನಾಗಿ ಆಡಬಾರದ ಮಾತನ್ನು ಜನಪ್ರತಿನಿಧಿಯಾಗಿ ಆಡಿದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರ ನಡೆ ತೀವ್ರ ಖಂಡನಾರ್ಹ ಮತ್ತು ಸಂವಿಧಾನ ವಿರೋಧಿ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಅಧ್ಯಕ್ಷ ಬೆಳಗಾಮಿ ಮಹಮ್ಮದ್ ಸಾದ್
ಹೇಳಿದ್ದಾರೆ.
ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲಬೇಕಿತ್ತು, ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ, ಹಿಂದೂಗಳು ಹೆಚ್ಚು ಮಕ್ಕಳನ್ನು ಹುಟ್ಟಿಸಿ, 80 ಶೇಕಡಾ ಮಂದಿ ಎದ್ದು ನಿಂತರೆ ಮುಸ್ಲಿಮರು ಧೂಳಿಪಟ ವಾಗುತ್ತಾರೆ ಇತ್ಯಾದಿ ಇತ್ಯಾದಿ ಪ್ರಚೋದನಕಾರಿ ಮತ್ತು ಅತ್ಯಂತ ಅವಹೇಳನಕಾರಿ ಮಾತುಗಳನ್ನು ಶಾಸಕ ಆಡುವುದನ್ನು ಈ ದೇಶ ಅತ್ಯಂತ ಆತಂಕದಿಂದ ನೋಡಬೇಕಾಗಿದೆ.
ಪ್ರತಿಭಟನೆ ಎಲ್ಲರ ಹಕ್ಕು. ಪ್ರತಿಭಟಿಸುವುದು ದೇಶದ್ರೋಹವಲ್ಲ. ಆದರೆ ಪ್ರತಿಭಟನೆಯನ್ನು ಹತ್ತಿಕ್ಕುವುದು ಮತ್ತು ಪ್ರತಿಭಟಿಸುವವರಿಗೆ ಬೆದರಿಕೆ ಹಾಕುವುದು ಸಂವಿಧಾನ ವಿರೋಧಿ ಮತ್ತು ದೇಶದ್ರೋಹಿ ಕ್ರಮವಾಗಿದೆ. ಮಾನ್ಯ ಸಭಾಪತಿಯವರು ರೆಡ್ಡಿ ಅವರನ್ನು ಶಾಸಕತ್ವದಿಂದ ವಜಾ ಮಾಡಬೇಕು ಮತ್ತು ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚ್ಚಾಟಿಸಿ ತಾನು ಸಂವಿಧಾನ ಪರ ಎಂಬುದನ್ನು ದೃಡಪಡಿಸಬೇಕು ಎಂದವರು ಆಗ್ರಹಿಸಿದ್ದಾರೆ.