ಮಂಗಳೂರು: ಪೌರತ್ವ ತಿದ್ದುಪಡಿ ವಿರೊಧಿಸಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ಮುಸ್ಲಿಂ ಸಮುದಾಯದ ಕುಟುಂಬಕ್ಕೆ ಘೋಷಣೆ ಮಾಡಿದ್ದ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ಹಿಂಪಡೆಯಲು ಮುಂದಾಗಿದೆ.
ಆತುರದಲ್ಲಿ ನಾವು ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಘೋಷಿಸಿದ್ದೆವು. ಘೊಷಣೆ ಮಾಡಿದ ಪರಿಹಾರ ವನ್ನು ಹಿಂಪಡೆಯಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಲಭೆಯಲ್ಲಿ ಪಾಲ್ಗೊಂಡವರು ಅಮಾಯಕರಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಹಿಂಸಾಚಾರದಲ್ಲಿ ಮೃತಪಟ್ಟವರು ಸಹ ಪಾಲ್ಗೊಂಡಿದ್ದರು. ಅನೇಕರು ಇಲ್ಲಿ ಗಲಭೆ ಸೃಷ್ಟಿಸಿದರು. ಅದನ್ನು ನಿಯಂತ್ರಿಸಲು ಪೊಲೀಸರು ಅನಿವಾರ್ಯವಾಗಿ ಗೋಲಿಬಾರ್ ನಡೆಸಬೇಕಾಯಿತು.
ಇದಕ್ಕೆ ಪೂರಕವಾಗಿ ಮಂಗಳೂರು ಪೊಲೀಸರು ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿರುವ ವಿಡಿಯೊಗಳು ಪುಷ್ಟೀಕರಿಸುತ್ತವೆ.
ಇವೆಲ್ಲಾ ನೋಡಿದರೆ ಗೋಲಿಬಾರ್ ನಲ್ಲಿ ಮೃತಪಟ್ಟವರ ಬಗ್ಗೆ ಸಮಗ್ರ ತನಿಖೆಯಾಗಬೇಕು.
ಪ್ರಕರಣವನ್ನು ಸಿಐಡಿ ಮತ್ತು ನ್ಯಾಯಾಂಗ ಪ್ರತ್ಯೇಕ ತನಿಖೆಗೆ ಒಪ್ಪಿಸಲಾಗಿದೆ. ತನಿಖೆಯಲ್ಲಿ ಮೃತಪಟ್ಟವನ್ನು ಅಪರಾಧಿಗಳೆಂದು ಸಾಬೀತಾದರೆ ಅವರಿಗೆ ಪರಿಹಾರ ನೀಡುವುದು ಅಕ್ಷಮ್ಯ ಅಪರಾಧವಾಗುತ್ತದೆ. ಹೀಗಾಗಿ ಸದ್ಯಕ್ಕೆ ಪರಿಹಾರ ಮೊತ್ತವನ್ನು ಅವರ ಕುಟುಂಬಕ್ಕೆ ನೀಡುವುದಿಲ್ಲ.
ತನಿಖೆ ಮುಗಿಯುವವರೆಗೂ 1 ರೂಪಾಯಿ ಕೂಡ ಕೊಡುವುದಿಲ್ಲ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ತನಿಖೆ ಮುಗಿದ ನಂತರ ಮೃತಪಟ್ಟವರು ನಿರಪರಾಧಿಗಳು ಎಂದು ಸಾಬೀತಾದರೆ ಮಾತ್ರ ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು.
ಕೇರಳದಿಂದ ಗ್ರಹಣ ಹಿನ್ನಲೆಯಲ್ಲಿ ದೋಷ ಪರಿಹಾರ ಪೂಜೆ ಮುಗಿಸಿ ಮಂಗಳೂರಿಗೆ ವಾಪಸ್ಸಾದ ವೇಳೆ ಇಂದು ಸಿಎಂ ಸುದ್ದಿಗಾರರಿಗೆ ಈ ಹೇಳಿಕೆ ನೀಡಿದ್ದಾರೆ.
ಇನ್ನು ಮುಖ್ಯಮಂತ್ರಿಯವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಪರಿಹಾರ ಘೋಷಿಸಿದ್ದ ಮುಖ್ಯಮಂತ್ರಿಗಳು ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಅಂದರೆ ಈ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳಲ್ಲಿ ಗೊಂದಲವಿದೆ ಎಂಬುದು ಗೊತ್ತಾಗುತ್ತದೆ. ಪೊಲೀಸರು ಕಟ್ಟುಕಥೆ ಹೇಳುತ್ತಿದ್ದಾರೆ. ಸರ್ಕಾರ ಬಡ, ಮುಗ್ಧ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.