ಸಿಂಧನೂರು.ಜ.31 – ತಾಲ್ಲೂಕಿನ ಸಿದ್ರಾಂಪುರ ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ವೆಸಗಿದ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಮುಸ್ಲಿಂ ಸೇವಾ ಸಮಿತಿ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಗಾಂಧಿವೃತ್ತದ ಮೂಲಕ ಮಿನಿವಿಧಾನಸೌಧ ತಲುಪಿತು. ನಂತರ ಮುಸ್ಲಿಂ ಸಮಾಜದ ಧರ್ಮಗುರು ಮೌಲಾನಾ ತಾಜುಮುದ್ದೀನ್ ಮಾತನಾಡಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಂದಾಗ ಮಾತ್ರ ಇಂತಹ ಹೀನಾಯ ಕೃತ್ಯಗಳನ್ನು ತಡೆವೊಡ್ಡಲು ಸಾಧ್ಯ. ತಾಲೂಕಿನ ಸಿದ್ರಾಂಪುರ ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಯನ್ನು ಕೂಡಲೇ ಪೊಲೀಸ್ ಇಲಾಖೆಯವರು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಘಟನೆ ನಡೆದು 10 ದಿನಗಳು ಕಳೆದರೂ ಆರೋಪಿಯನ್ನು ಪತ್ತೆ ಹಚ್ಚದಿರುವುದು ಖಂಡನೀಯವಾಗಿದೆ. ಇಂತಹ ಅಮಾನವೀಯ ಘಟನೆಗಳಿಗೆ ಪ್ರತಿಯೊಬ್ಬರೂ ಜಾತ್ಯಾತೀತವಾಗಿ ಒಂದಾಗಿ ಖಂಡಿಸುವ ಅವಶ್ಯಕತೆ ಇದೆ. ಇಂತಹ ದುಷ್ಕರ್ಮಿಯನ್ನು ಪತ್ತೆ ಹಚ್ಚಿ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಬಾಬರ್ಪಾಷಾ ವಕೀಲ, ಕೆ.ಜಿಲಾನಿಪಾಶಾ, ಬಾಬರ್ಪಟೇಲ್, ಖಾದರ್ಸುಬಾನಿ, ಜಹಿರುಲ್ ಹಸನ್, ಶಪ್ಪುಖಾನ್, ನಿಸಾರ್ಖಾನ್, ಬಸವರಾಜ್ ಬಾದರ್ಲಿ, ಚಾಂದ್ಪಾಷಾ ಜಾಹಗೀರ್ದಾರ್, ಸಮದ್ ಚೌದರಿ, ಎಸ್ಐಒ ಅಧ್ಯಕ್ಷ ನೂರ್ಮಹ್ಮದ್, ಸೈಯದ್ ಆಸೀಫ್, ದಾವೂದ್ಪಾಷಾ, ಹುಸೇನ್ಭಾಷಾ ಗೊರೇಬಾಳ, ಇಮ್ತಿಯಾಜ್, ಹನೀಪ್ ಸೇರಿದಂತೆ ನೂರಾರು ಯುವಕರು ಇದ್ದರು.