ನವದೆಹಲಿ/ಆಗ್ರಾ, ಮಾ.4 (ಪಿಟಿಐ)- ವಿಶ್ವ ಪ್ರಸಿದ್ಧ ತಾಜ್ಮಹಲ್ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆಗೆ ಹೆದರಿ, ಮುನ್ನೆಚ್ಚರಿಕೆ ಕ್ರಮವಾಗಿ ಸಂಕೀರ್ಣವನ್ನು ಖಾಲಿ ಮಾಡಲಾಗಿದೆ.ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಪೊಲೀಸರ ತುರ್ತು ಪ್ರತಿಕ್ರಿಯೆ ಸಂಖ್ಯೆ 112ಕ್ಕೆ ಕರೆ ಮಾಡಿ, ಸ್ಮಾರಕದೊಳಗೆ ಬಾಂಬ್ ಇಡಲಾಗಿದೆ ಎಂದು ಹೇಳಿದರು.
ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಕ್ಷಣ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಗೆ ತಿಳಿಸಿದರು. ಕೇಂದ್ರ ಪುರಾತತ್ವ ಇಲಾಖೆ ಮತ್ತು ಸಿಐಎಸ್ಎಫ್ ಸಂರಕ್ಷಣೆಯಲ್ಲಿರುವ 17ನೇ ಶತಮಾನದ ಸ್ಮಾರಕ ತಾಜ್ಮಹಲ್ ಪ್ರದೇಶದಲ್ಲಿದ್ದ ಸಾರ್ವಜನಿಕರು ಹಾಗೂ ಸಂದರ್ಶಕರನ್ನು ತೆರವುಗೊಳಿಸಲಾಯಿತು.
ನಂತರ ಸುಮಾರು 9.15ಕ್ಕೆ ಬಾಂಬ್ ಸ್ಕ್ವಾಡ್ ತಪಾಸಣೆ ಕಾರ್ಯಾಚರಣೆ ನಡೆಸಿ ಪ್ರಾಂಗಣ ಮತ್ತು ತಾಜ್ಮಹಲ್ ಒಳಗೆ ಯಾವುದೇ ಸಂಶಯಾಸ್ಪದ ವಸ್ತುಗಳು ಕಂಡುಬರಲಿಲ್ಲ ಎಂದು ವರದಿ ನೀಡಿದರು. ಇದೊಂದು ಹುಸಿ ಕರೆ ಎಂದು ರುಜುವಾತಾದ ನಂತರ ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದರು. ಕರೆ ಉತ್ತರ ಪ್ರದೆಶದ ಫಿರೋಜಾಬಾದ್ನಿಂದ ಮಾಡಲಾಗಿದೆ ಎಂಬುದು ಪತ್ತೆ ಹಚ್ಚಿದರು.