ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಸಿಂಧನೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಬುಧವಾರ ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಆಡಳಿತ ಮಂಡಳಿಯಿAದ ಪ್ರತಿಭಟನೆ ನಡೆಸಲಾಯಿತು.
ನಗರ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಖಾಸಗಿ ಸಂಸ್ಥೆಗಳ ಮುಖಂಡರು ಮಿನಿವಿಧಾನಸೌಧ ತಲುಪಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಟಿ.ಬಸವರಾಜ ಮಾತನಾಡಿ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ತಮ್ಮ ಸೇವೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳ ಮೇಲೆ ಅನೇಕ ಸಮಾಜಘಾತುಕ ಶಕ್ತಿಗಳ ಕಣ್ಣು ಬಿದ್ದಿದೆ. ತಮ್ಮ ಸ್ವಾರ್ಥಕ್ಕಾಗಿ ಆಡಳಿತ ಮಂಡಳಿಗಳ ಮುಖ್ಯಸ್ಥರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆತಂಕವಾಗುತ್ತಿದೆ. ಜೊತೆಗೆ ಉಪಾಧ್ಯಯರ ಏಕಾಗ್ರತೆಗೆ ಧಕ್ಕೆಯಾಗುತ್ತಿದೆ. ಕೂಡಲೇ ಸರ್ಕಾರ ಈ ಬಗ್ಗೆ ಮುತುವರ್ಜಿವಹಿಸಬೇಕೆಂದರು.
ತಾಲ್ಲೂಕು ಅಧ್ಯಕ್ಷ ವೈ.ನರೇಂದ್ರನಾಥ ಮಾತನಾಡಿ, ಸರ್ಕಾರದ ಆದೇಶ ಪ್ರಕಾರ ಶೇ.೭೦ರಷ್ಟು ಶುಲ್ಕವನ್ನು ಪಾವತಿಸುವಂತೆ ಪಾಲಕರಿಗೆ ಇಲಾಖೆಯಿಂದ ನಿರ್ದೇಶನವಿದ್ದರೂ ಕೆಲವು ಜನ ಬೋಧನಾ ಶುಲ್ಕವನ್ನು ಪಾವತಿಸದೇ ಹಾಗೂ ಕಳೆದ ಹಲವಾರು ವರ್ಷಗಳ ಶುಲ್ಕ ಪಾವತಿಸದೆ ಕಿಡಿಗೇಡಿಗಳ ಮಾತನ್ನು ಕೇಳಿ ಶಾಲಾ ಮುಖ್ಯಸ್ಥರ ಮೇಲೆ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ದೌರ್ಜನ್ಯ ಮಾಡುವ ಮಟ್ಟಕ್ಕೆ ಹೋಗಿದ್ದಾರೆ. ಇದರಿಂದ ಶಿಕ್ಷಣ ಸಂಸ್ಥೆಯವರು ಭಯಭೀತರಾಗಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಕಾನೂನಾತ್ಮಕ ಭದ್ರತೆಯನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ಮಲ್ಲನಗೌಡ ಕಾನಿಹಾಳ, ವೀರೇಶ ಅಗ್ನಿ, ಡಿ.ಎಚ್.ಕಂಬಳಿ, ಸರಸ್ವತಿ ಪಾಟೀಲ್, ದ್ರಾಕ್ಷಾಯಿಣಿ, ಮಾನವಿ ತಾಲೂಕ ಕಾರ್ಯದರ್ಶಿ ರಾಜು ತಾಳಿ ಕೊಟಿ, ಬಿ ವಿ ರೆಡ್ಡಿ, ಮುಕೀಮ್, ರಾಯಚೂರಿನ ಇಕ್ಬಾಲ್ ಸಾಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿದರ್ಸೇರಿದಂತೆ ಅನೇಕರು ಇದ್ದರು.