ಬೆಂಗಳೂರು, ಜ. ೩೧- ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಉಳಿವಿಗೋಸ್ಕರ ಗಡಿಯ ವಿಚಾರವಾಗಿ ಅನಗತ್ಯವಾಗಿ ಕಾಲುಕೆದರಿಕೊಂಡು ಮಾತನಾಡುತ್ತಿದ್ದಾರೆ ನಮ್ಮ ಪ್ರದೇಶಗಳ ಬಗ್ಗೆ ಅವರಿಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಮತ್ತು ರಾಜ್ಯದ ನೆಲ, ಜಲ, ನೀರು, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದರು
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ೧೯೦ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೆಳಗಾವಿ ಸೇರಿದಂತೆ ಗಡಿಯ ಎಲ್ಲಾ ಜಿಲ್ಲೆಗಳು ಎಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಸ್ವಾರ್ಥ ರಹಿತ ಜೀವನವನ್ನು ನಡೆಸಬೇಕು. ಶಾಲಾ ಹಂತದಲ್ಲಿಯೇ ಇದನ್ನು ಅರ್ಥ ಮಾಡಿಸಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಮಹಾರಾಷ್ಟ್ರದ ಮುಖ್ಯಮಂತ್ರಿ ನಿತ್ಯ ಒಂದೊಂದು ವಿಚಾರ ಇಟ್ಟುಕೊಂಡು ಗಡಿ ವಿಚಾರವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಗಡಿ ತಕರಾರು ಸುಪ್ರೀಂಕೋರ್ಟ್ನಲ್ಲಿದೆ.ತೀರ್ಪು ಬರುವವರಿಗೆ ಸಮಾಧಾನದಿಂದ ಕಾಯಬೇಕು ಎಂದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ವೇದಿಕೆಯ ಯುವ ಘಟಕದ ಅಧ್ಯಕ್ಷ ಟಿ.ಎ. ಧರ್ಮರಾಜ್ಗೌಡ, ಎಚ್. ರವೀಂದ್ರ ಮತ್ತಿತರರು ಭಾಗವಹಿಸಿದ್ದರು.