ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ 80,000 ಖಾತೆಗಳ ನಿರ್ವಹಣೆ ಹೊಣೆ ಭಾರತೀಯ ಅಂಚೆಗೆ ವರ್ಗಾವಣೆ

ಹೆಣ್ಣುಮಕ್ಕಳಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ 80,000 ಖಾತೆಗಳ ನಿರ್ವಹಣೆಗೆ ಭಾರತೀಯ ಅಂಚೆಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.

0
179

ಅ.22 ರಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಾರ್ಷಿಕವಾಗಿ 1.5 ಲಕ್ಷ ಖಾತೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಚೆ ಇಲಾಖೆಗೆ ವರ್ಗಾವಣೆ ಮಾಡಲಿದೆ. ಸರ್ಕಾರದ ಈ ಕ್ರಮದಿಂದಾಗಿ ಯೋಜನೆಯ ಫಲಾನುಭವಿಗಳಿಗೆ 18 ವರ್ಷವಾದಾಗ ಹೆಚ್ಚಿನ ಮೊತ್ತದ ಹಣ ಲಭ್ಯವಾಗಲಿದೆ.

ಈ ಹಿಂದೆ ಈ ಯೋಜನೆಯನ್ನು 2006-2007 ರಿಂದ ಲೈಫ್ ಇನ್ಶ್ಯೂರೆನ್ಸ್ ಕಾರ್ಪೊರೇಷನ್(ಎಲ್ಐಸಿ)ಗೆ ವಹಿಸಲಾಗಿತ್ತು. ಆದರೆ ಅಂಚೆ ಇಲಾಖೆಗಿಂತಲೂ ಎಲ್ಐಸಿಯಲ್ಲಿ ಬಡ್ಡಿ ದರ ಕಡಿಮೆ ಇದ್ದ ಕಾರಣದಿಂದಾಗಿ ಈ ಯೋಜನೆಯನ್ನು ಅಂಚೆ ಇಲಾಖೆಗೆ ವಹಿಸಲಾಗಿದೆ.

ಬಿಪಿಎಲ್ ಕುಟುಂಬಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯಿಂದ ಹೆಚ್ಚು ಲಾಭ ಉಂಟಾಗಿ, ಯಶಸ್ವಿ ಯೋಜನೆಯಾಗಿ ಹೊರಹೊಮ್ಮಿತ್ತು. ಈ ಯೋಜನೆಯಡಿ ರಾಜ್ಯದಿಂದ ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಬಾಂಡ್ ವಿತರಿಸಲಾಗುತ್ತದೆ. ಫಲಾನುಭವಿ ಹೆಣ್ಣುಮಗುವಿಗೆ 18 ವರ್ಷ ತುಂಬಿದ ಬಳಿಕ 1 ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯನ್ನು ನಿರ್ವಹಿಸುವುದಕ್ಕೆ ಪ್ರಧಾನ ಅಂಚೆ ಕಚೇರಿ ಸಿದ್ಧತೆ ನಡೆಸಿದೆ.

ಈ ಖಾತೆಗಳನ್ನು ನಿರ್ವಹಿಸುವುದಕ್ಕಾಗಿಯೇ ಪ್ರತ್ಯೇಕ ವಿಭಾಗವನ್ನು ತೆರೆಯಲಿದ್ದು, ಇದಕ್ಕಾಗಿ 2 ನೇ ಮಹಡಿಯಲ್ಲಿ 12 ಸಿಬ್ಬಂದಿಗಳನ್ನೊಳಗೊಂದ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಎಲ್ಲಾ ಖಾತೆಗಳನ್ನು ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ವರ್ಗಾವಣೆ ಮಾಡುವ ನಿರೀಕ್ಷೆ ಇದೆ ಎಂದು ಅಂಚೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎಲ್ಐಸಿಯಿಂದ 1 ಲಕ್ಷ ಸಿಗುವ ಬದಲು ಈಗ ಫಲಾನುಭವಿ ಹೆಣ್ಣುಮಗುವಿಗೆ 18 ತುಂಬಿದಾಗ ಅಂಚೆಯಿಂದ 1,27,000 ರೂಪಾಯಿ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಪ್ರಕಾರ ಏಕ ಕಾಲಕ್ಕೆ 19,300 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಭಾರತೀಯ ಅಂಚೆ ವಾರ್ಷಿಕವಾಗಿ ಪ್ರತಿ ಮಗುವಿಗೆ 15 ವರ್ಷಗಳವರೆಗೆ 3,000 ರೂಪಾಯಿ ಪಾವತಿಸಲು ಅವಕಾಶ ನೀಡಲಿದೆ ಆರ್ಥಿಕ ದೃಷ್ಟಿಯಿಂದಲೂ ಅಂಚೆಯಲ್ಲಿ ಖಾತೆ ನಿರ್ವಹಣೆ ಮಾಡುವುದು ಸುಲಭ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here