ಹೈದರಾಬಾದ್: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಥಗಿತಗೊಂಡಿದ್ದ ಅಂತರರಾಜ್ಯ ಬಸ್ ಸಂಚಾರವನ್ನು ಏಳು ತಿಂಗಳ ನಂತರ ಮಂಗಳವಾರ ಪುನಾರಾರಂಭವಾಗಿದೆ.
ಇಂದು ದೆಹಲಿಯ ಆನಂದ್ ವಿಹಾರ್ ಅಂತರರಾಜ್ಯ ಬಸ್ ನಿಲ್ದಾಣದಿಂದ ನೆರೆಯ ರಾಜ್ಯಗಳಿಗೆ ಬಸ್ ಸಂಚಾರ ಆರಂಭವಾಗಿದ್ದು, ಶೇ.50 ರಷ್ಟು ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ನೀಡಲಾಗಿದೆ.
ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ(ಯುಪಿ), ಹರಿಯಾಣ, ರಾಜಸ್ಥಾನ ಮತ್ತು ಉತ್ತರಾಖಂಡದಿಂದ ಸುಮಾರು 5,800 ಪ್ರಯಾಣಿಕರನ್ನು ಹೊತ್ತ 145 ಬಸ್ಸುಗಳು ಇಂದು ಬೆಳಗ್ಗೆ 9: 30ಕ್ಕೆ ದೆಹಲಿಗೆ ಆಗಮಿಸಿದವು.
ದೇಶಾದ್ಯಂತ ಅನ್ಲಾಕ್ 1 ಜಾರಿಯಾದ ನಂತರ ಅಂತರರಾಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ಕಲ್ಪಿಸಿತ್ತು. ಅದರಂತೆ ಕೆಲವು ರಾಜ್ಯಗಳಲ್ಲಿ ಸೆಪ್ಟೆಂಬರ್ನಲ್ಲಿಯೇ ಅಂತರರಾಜ್ಯ ಬಸ್ ಸಂಚಾರ ಆರಂಭವಾಗಿದೆ. ಆದರೆ ದೆಹಲಿಯಲ್ಲಿ ಅಂತರರಾಜ್ಯ ಬಸ್ ಸಂಚಾರಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಇದುವರೆಗೂ ಸಂಚಾರ ಆರಂಭವಾಗಿರಲಿಲ್ಲ.