ಅಂಬಾವಿಲಾಸದಲ್ಲಿ ಆಯುಧಪೂಜೆ ಸಂಭ್ರಮ; ಅರಮನೆಯ ಖಾಸಾ ಆಯುಧಗಳಿಗೆ ಯದುವೀರ್ ನಮನ

0
211

ಅಂಬಾವಿಲಾಸದಲ್ಲಿ ಆಯುಧಪೂಜೆ ಸಂಭ್ರಮ; ಅರಮನೆಯ ಖಾಸಾ ಆಯುಧಗಳಿಗೆ ಯದುವೀರ್ ನಮನ

ಮೈಸೂರು : ನಾಡಹಬ್ಬ ದಸರಾ ವೈಭವದ ಪ್ರಮುಖ ದಿನವಾದ ಇಂದು ಆಯುಧ ಪೂಜೆಯ ಕಾರ್ಯಕ್ರಮಗಳು ಅಂಬಾವಿಲಾಸ ಅರಮನೆಯಲ್ಲಿ ಮನೆಮಾಡಿದೆ. ನವರಾತ್ರಿ ಪೂಜೆಗಳು ಪ್ರತಿ ದಿನ ನಡೆಯುತ್ತಿದ್ದು, ಇಂದು ಮುಂಜಾನೆಯಿಂದಲೇ ಆಯುಧ ಪೂಜಾ ಕೈಂಕರ್ಯಗಳು ರಾಜವಂಶಸ್ಥರಿಂದ ಆರಂಭಗೊಂಡಿದೆ.

ಇಂದು ಬೆಳಿಗ್ಗೆ 6 ಗಂಟೆಗೆ ಪಟ್ಟದ ಆನೆ, ಕುದುರೆ, ಒಂಟೆ, ಹಸು ಆನೆಬಾಗಿಲಿಗೆ ಆಗಮನವಾಗಿದ್ದು, ಬೆಳಿಗ್ಗೆ 6.15ರಿಂದ ಚಂಡಿಹೋಮ ಸಹ ನಡೆದಿದೆ. ಬೆಳಿಗ್ಗೆ 5.28 ರಿಂದ 6.48ಕ್ಕೆ ಅರಮನೆಯ ಖಾಸ ಆಯುಧಗಳನ್ನ ಅರಮನೆ ಹೊರ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗಿದೆ. ಅಲ್ಲದೇ ಬೆಳಿಗ್ಗೆ 7.20ರಿಂದ 7.40ರ ವರೆಗೆ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗಿದ್ದು, ಬೆಳಿಗ್ಗೆ 9.15ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ಸಹ ನಡೆಯಿತು.

10.15ಕ್ಕೆ ಪಟ್ಟದ ಆನೆ ಕುದುರೆ ಒಂಟೆ ಹಸು ಆನೆ ಬಾಗಿಲಿಗೆ ಆಗಮನವಾಗಿದ್ದು, 10.50ರಿಂದ 11.25ರವರೆಗೆ ಯದುವಂಶದ ಮಹಾರಾಜ ಯುದುವೀರ್‌ರಿಂದ ಆಯುಧಪೂಜೆ ಕೈಂಕರ್ಯಗಳು ಅರಮನೆಯ ಕಲ್ಯಾಣ ಮಂಟಪದಲ್ಲಿ ಪೂಜೆ ನಡೆಯಲಿದೆ. ನಂತರ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಸವಾರಿ ತೊಟ್ಟಿಯಲ್ಲಿ ಪೂಜೆ, ಪೊಲೀಸ್ ಇಲಾಖೆಯಿಂದ ಫಿರಂಗಿ ಗಾಡಿಗಳಿಗೆ ಪೂಜೆ ಸಂಪನ್ನಗೊಳಲಿದ್ದು, ಸಂಜೆ ಎಂದಿನಂತೆ ಖಾಸಗಿ ದರ್ಬಾರ್ ಹಾಗೂ ಸಿಂಹ ವಿಸರ್ಜನೆ ಮಾಡಲಾಗುವುದು.

ಇತ್ತ ಆಯುಧ ಪೂಜೆ ಹಿನ್ನೆಲೆ ಅರಮನೆಯ ಶತಮಾನಗಳ ಪಟ್ಟದ ಕತ್ತಿ ಪೂಜೆಗೆ ಸಿದ್ಧತೆ ಸಹ ನಡೆದಿದೆ. ಅರಮನೆಯಿಂದ ಸೋಮೇಶ್ವರ ದೇವಸ್ಥಾನಕ್ಕೆ ಕತ್ತಿಯನ್ನು ರಾಜವಂಶಸ್ಥರು ರವಾನಿಸಿದ್ದು, ಈ ಪೂಜೆಯಲ್ಲಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ ಜೊತೆಗೆ ಕೆಲ ಸಿಬ್ಬಂದಿ ಮಾತ್ರ ಭಾಗಿಯಾಗಲಿದ್ದಾರೆ. ಮಂಗಳ ವಾದ್ಯಗಳೊಂದಿಗೆ ಅರಮನೆಯ ಖಾಸಾ ಆಯುಧಗಳು ಜಯ ಮಾರ್ತಾಂಡ ದ್ವಾರದ ಮೂಲಕ ಆಯುಧಗಳ ರವಾನೆಯಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಎಲ್ಲಾ ಕಾರ್ಯಕ್ರಮ ನಡೆಯುತ್ತಿದೆ.

LEAVE A REPLY

Please enter your comment!
Please enter your name here