ನವದೆಹಲಿ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರೂ, ಕೆಲವರು ಅದರತ್ತ ಗಮನ ಕೊಡದಿರುವ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ಒಂದು ಸಾವಿರ ರೂಪಾಯಿಗೆ ಏರಿಸಿರುವುದು ಇತ್ತೀಚಿನ ಬೆಳವಣಿಗೆ. ಸ್ವಲ್ಪ ದಿನಗಳ ಹಿಂದೆ ದಂಡದ ಮೊತ್ತ 500 ರೂಪಾಯಿ ಇದ್ದ ಸಂದರ್ಭದಲ್ಲಿ ನಡೆಸಿರುವ ಕುತೂಹಲಕರ ಘಟನೆ ಇದಾಗಿದೆ.
ಮಾಸ್ಕ್ ನಿಯಮದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದ ಸರ್ಕಾರ, ಒಂಟಿಯಾಗಿ ಕಾರಿನಲ್ಲಿ ಹೋಗುತ್ತಿದ್ದರೆ ಮಾಸ್ಕ್ ಧರಿಸುವುದು ಅಗತ್ಯವಿಲ್ಲ ಎಂದಿದೆ. ಆದರೆ ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚಿಗೆ ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು ಎನ್ನುವುದು ನಿಯಮ.
ಅದರಂತೆ. ದೆಹಲಿ ಹೈಕೋರ್ಟ್ನ ಸೌರಭ್ ಶರ್ಮ ಎನ್ನುವ ಹಿರಿಯ ವಕೀಲರು ಸೆಪ್ಟೆಂಬರ್ 9ರಂದು ಕಾರಿನಲ್ಲಿ ಒಬ್ಬರೇ ಹೋಗುತ್ತಿದ್ದರು. ಅವರು ನಿಯಮಯದಂತೆ ಮಾಸ್ಕ್ ಧರಿಸಲಿಲ್ಲ. ಪೊಲೀಸರು ಅವರನ್ನು ಅಡ್ಡಗಟ್ಟಿಬಿಟ್ಟರು. ಪಾಪ ಅವರಿಗೇನು ಗೊತ್ತು ಇವರು 20 ವರ್ಷ ಅನುಭವ ಹೊಂದಿರುವ ವಕೀಲರೆಂದು. ಆ ಪೊಲೀಸರಿಗೆ ಸರಿಯಾಗಿ ನಿಯಮ ಗೊತ್ತಿತ್ತೋ, ಗೊತ್ತಿಲ್ಲವೋ, ಒಟ್ಟಿನಲ್ಲಿ ಸೌರಭ್ ಅವರ ಕಾರಿಗೆ ಅಡ್ಡಹಾಕಿಬಿಟ್ಟರು.
ಇವರು ಕಾರಣ ಕೇಳಿದಾಗ, ಮಾಸ್ಕ್ ಹಾಕಿಲ್ಲದ ಕಾರಣ, 500 ರೂಪಾಯಿ ದಂಡ ನೀಡುವಂತೆ ಅಲ್ಲಿದ್ದ ಪೊಲೀಸ್ ಹೇಳಿದ್ದಾರೆ.
ಇದರಿಂದ ಗರಂ ಆದ ವಕೀಲರು ನಿಯಮಗಳನ್ನು ಪೊಲೀಸರಿಗೆ ಹೇಳಿದ್ದಾರೆ. ತಾವು ವಕೀಲರಾಗಿದ್ದು, ಎಲ್ಲಾ ನಿಯಮಗಳ ಪಾಲನೆ ಮಾಡಿರುವುದಾಗಿಯೂ ಹೇಳಿದ್ದಾರೆ. ಪೊಲೀಸರಿಗೆ ಎಲ್ಲಾ ರೀತಿಯ ಕಾನೂನು ಕಲಿಸಲು ಮುಂದಾಗಿದ್ದಾರೆ.
ಆದರೆ ಆ ಪೊಲೀಸ್ ಮಾತ್ರ ಪಟ್ಟು ಬಿಡಲೇ ಇಲ್ಲ. ಏನು ಬೇಕಾದರೂ ಮಾಡಿಕೊಳ್ಳಿ, ಅದೆಲ್ಲಾ ಗೊತ್ತಿಲ್ಲ. ಈಗ 500 ರೂಪಾಯಿ ದಂಡ ಕಟ್ಟಿ ಎಂದಿದ್ದಾರೆ. ಸಿಟ್ಟಿನಿಂದ ವಕೀಲರು ಬೇರೆ ದಾರಿ ಕಾಣದೇ ದಂಡ ಕಟ್ಟಿಬಂದಿದ್ದಾರೆ.
ಹೇಳಿಕೇಳಿ ವಕೀಲರು. ಬಿಟ್ಟಾರೆಯೇ? ಇದೀಗ ಹೈಕೋರ್ಟ್ಗೆ ಈ ದಂಡದ ವಿರುದ್ಧ ಅರ್ಜಿ ಹಾಕಿದ್ದಾರೆ. ನಿಯಮ ಪಾಲನೆ ಮಾಡಿದರೂ ಪೊಲೀಸ್ ಅಧಿಕಾರಿ ತಮ್ಮ ವಿರುದ್ಧ ನಡೆದುಕೊಂಡಿರುವ ರೀತಿಯ ಕುರಿತು ಅರ್ಜಿಯಲ್ಲಿ ವಿವರಿಸಿರುವ ಸೌರಭ್ ಅವರು, ತಮಗಾಗಿರುವ ಮಾನಸಿಕ ಹಿಂಸೆಯ ಕುರಿತು ಉಲ್ಲೇಖಿಸಿದ್ದಾರೆ.
ಮಾತ್ರವಲ್ಲದೇಮ ತಮ್ಮ 500 ರೂಪಾಯಿ ದಂಡದ ಹಣವನ್ನು ವಾಪಸ್ ನೀಡುವಂತೆ ಹಾಗೂ ತಮಗಾಗಿರುವ ಅನ್ಯಾಯಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ಪೊಲೀಸರಿಗೆ ಆದೇಶಿಸುವಂತೆ ಅರ್ಜಿಯಲ್ಲಿ ಉಲ್ಲೇಖಮಾಡಿದ್ದಾರೆ.
ವಕೀಲರು ನಿಯಮ ಪಾಲನೆ ಮಾಡಿದ್ದರೂ ದಂಡ ವಸೂಲಿ ಮಾಡಿರುವ ಪೊಲೀಸ್ ಅಧಿಕಾರಿ ಸದ್ಯ ಪೇಚಿಗೆ ಸಿಲುಕಿದ್ದಾರೆ. ಕೋರ್ಟ್ ಏನು ಆದೇಶ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ!