ರಾಯಚೂರು.ಅ.05- ಉದ್ಯಾನವನ ಸ್ಥಳ ಅತಿಕ್ರಮಣ, ಮೂಲಭೂತ ಸೌಕರ್ಯ ಅಬಿವೃದ್ಧಿ ನಿರ್ಲಕ್ಷ್ಯೆ, ನಿಯಮಾನುಸಾರ ಬಹು ಮಹಡಿ ಕಟ್ಟಡ ನಿರ್ಮಿಸದಿರುವ ಪ್ರಕರಣಗಳಲ್ಲಿ ಯಾವುದೇ ಒತ್ತಡಕ್ಕೆ ಗುರಿಯಾಗದೇ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಇಂದು ಅಧ್ಯಕ್ಷ ಯಾಪಚೆಟ್ಟು ಗೋಪಾಲರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನೇಕ ವಿಷಯ ಚರ್ಚಿಸಲಾಯಿತು. ವಸತಿ ನಿವೇಶನ ಮಂಜೂರಾತಿ ನೀಡುವಾಗ ಮೂಲಭೂತ ಸೌಕರ್ಯ ಸಮಗ್ರ ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು. ಅಭಿವೃದ್ಧಿ ಮಾಡದಿರುವ ಲೇಔಟ್ಗಳನ್ನು ಖುದ್ದಾಗಿ ಪರಿಶೀಲಿಸಿ, ಕಾನೂನಾತ್ಮಕ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ತೀರ್ಮಾನಿಸಿತು. ನಗರವನ್ನು ಸುಂದರ ನಗರವನ್ನಾಗಿಸುವುದು ಮತ್ತು ಲೇಔಟ್ಗಳು ಮೂಲಭೂತ ಸೌಕರ್ಯ ಹೊಂದುವಂತೆ ಗಮನ ಹರಿಸುವುದು ಮೂಲ ಉದ್ದೇಶವೆಂದು ಅಧ್ಯಕ್ಷ ಗೋಪಾಲರೆಡ್ಡಿ ಅವರು ಹೇಳಿದರು.
ಭೀಮಣ್ಣ ಮಂಚಾಲಿ ಅವರು ಮಾತನಾಡಿ, ಎಲ್ಲಾ ವಸತಿ ಲೇಔಟ್ಗಳಲ್ಲಿ ಉದ್ಯಾನವನ ಅತಿಕ್ರಮಿಸಿ ಮನೆ ನಿರ್ಮಿಸಲಾಗಿದೆ. ಈ ಎಲ್ಲಾ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಚಂದ್ರಶೇಖರ ಅವರು ಮಾತನಾಡಿ, ಕಾನೂನು ಬದ್ಧವಾಗಿ ಅಪಾರ್ಟಮೆಂಟ್ ಕಟ್ಟದೇ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೇಖರ ವಾರದ್ ಮಾತನಾಡಿ, ವಸತಿ ಲೇಔಟ್ನಲ್ಲಿ ನಾಗರೀಕ ಸೌಲಭ್ಯ ನಿವೇಶನ ಅತಿಕ್ರಮಣ ತೆರವುಗೊಳಿಸಿ, ಪ್ರಾಧಿಕಾರ ವಶಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ವಾಣಿಶ್ರೀ, ಆಯುಕ್ತ ಶರಣಪ್ಪ, ನಗರಸಭೆ ಆಯುಕ್ತ ದೊಡ್ಡಮನಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.