ಸಿರವಾರ.ಅ.04- ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೀಡಾದ ಮನಿಶಾಳ ಸಾವಿಗೆ ಕಾರಣರಾದ ವ್ಯಕ್ತಿಗಳನ್ನು ಗಲ್ಲಿಗೇರಿಸಬೇಕು ಎಂದು ಕರ್ನಾಟಕ ರಾಜ್ಯ ಎಸ್.ಸಿ, ಎಸ್.ಟಿ ನೌಕರ ಸಂಘ ಸಿರವಾರ ತಾಲೂಕ ಘಟಕದಿಂದ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರದ ಮೂಲಕ ಆಗ್ರಹಿಸಿದರು.
ಈ ಕುರಿತು ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ತಹಶಿಲ್ದಾರರ ಮುಖಾಂತರ ಮನವಿ ಸಲ್ಲಿಸಿದರು. 19 ವರ್ಷದ ಯುವತಿಯ ಮೇಲೆ ಸೆಪ್ಟೆಂಬರ್ 14 ರಂದು ಜಮೀನಿನಿಂದ ಮೇವು ತರಲು ಹೋದಾಗ ದುಷ್ಕರ್ಮಿಗಳು ಯೋಜನೆ ರೂಪಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಕತ್ತು ಹಿಸುಕಿ, ನಾಲಿಗೆಯನ್ನು ತುಂಡರಿಸಿದ್ದಾರೆ. ಬೆನ್ನುಮೂಳೆ ಸೇರಿ ದೇಹದ ಇತರ ಮೂಳೆಗಳು ಮುರಿತಕ್ಕೆ ಒಳಗಾಗಿದ್ದವು.
ನಂತರ ಅವಳ ನಿತ್ರಾಣ ಸ್ಥಿತಿಯಿಂದಾಗಿ ಪಾರ್ಶ್ವವಾಯುಗೆ ತುತ್ತಾಗಿ ಉಸಿರಾಡಲು ಸೆಣಸಾಡಿ ಮೃತಳಾಗಿದ್ದಾಳೆ. ಆರೋಪಿಗಳು ಸಾಕ್ಷ್ಯ ನಾಶಕ್ಕಾಗಿ ಅವಳ ನಾಲಿಗೆಯನ್ನು ಕತ್ತರಿಸಿದ್ದರು. ಈ ರೀತಿಯ ಮಹಿಳೆಯರ ಮೇಲಿನ ದೌರ್ಜನ್ಯ ಎಸಗಿದವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಉಪಾದ್ಯಕ್ಷ ಮಲ್ಲೇಶ ಕಲ್ಲೂರು,ಸಿರವಾರ ತಾಲೂಕ ಅದ್ಯಕ್ಷ ಏಸುಮಿತ್ರ, ಮಲ್ಲಪ್ಪ ಚಾಗಭಾವಿ, ರಾಮಣ್ಣ, ಬಸವರಾಜ ಅತ್ತನೂರು, ಮೌನೇಶ, ದೇವೆಂದ್ರನಾಯ್ಕ್, ರವಿ ನಾಯ್ಕ್,ನರಸಮ್ಮ, ತಿರುಮಲರಾವ್ ದಾಸರ್ ಸೇರಿದಂತೆ ಇನ್ನಿತರರು ಇದ್ದರು.