ನವದೆಹಲಿ.ಮಾ.30-: ದೇಶದಲ್ಲಿ ಏಪ್ರಿಲ್ ತಿಂಗಳ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಿ, ಸಶಸ್ತ್ರ ಪಡೆಗಳ ನಿಯೋಜನೆ ಮಾಡಲಾಗುವುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶಗಳು ಸಂಪೂರ್ಣ ಸುಳ್ಳು ಎಂದಿರುವ ಭಾರತೀಯ ಸೇನೆ, ಕೊರೋನಾ ವೈರಸ್ ನಿಭಾಯಿಸಲು ಯೋಧರು ಮತ್ತು ರಾಷ್ಟ್ರೀಯ ಕೆಡೆಟ್ ಕೋರ್(ಎನ್ಸಿಸಿ) ಅನ್ನು ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ನಿಯೋಜಿಸಲಾಗುವುದು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹರಿದಾಡುತ್ತಿರುವ ಸಂದೇಶಗಳು ಸಂಪೂರ್ಣ ಸುಳ್ಳು ಎಂದು ಸೇನೆ ಟ್ವೀಟ್ ಮೂಲಕ ತಿಳಿಸಿದೆ.
ಈ ಮಧ್ಯೆ, ರಾಷ್ಟ್ರವ್ಯಾಪಿ ಕರೆ ನೀಡಲಾಗಿರುವ 21 ದಿನಗಳ ಲಾಕ್ಡೌನ್ ಅವಧಿಯನ್ನು ಏಪ್ರಿಲ್ 14 ನಂತರ ವಿಸ್ತರಿಸಲಾಗುವುದು ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಕೆಲವು ಮಾಧ್ಯಮಗಳ ವರದಿಗಳಲ್ಲಿನ ಊಹಾಪೋಹಗಳನ್ನು ತಿರಸ್ಕರಿಸಿರುವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಇವೆಲ್ಲ ನಿರಾಧಾರ ಎಂದು ಹೇಳಿದ್ದಾರೆ.
21 ದಿನಗಳ ಲಾಕ್ಡೌನ್ ಅವಧಿ ಮುಗಿದ ನಂತರ ಮತ್ತೆ ಅವಧಿಯನ್ನು ವಿಸ್ತರಿಸಲಾಗುವುದು ಎಂಬ ವದಂತಿಗಳು ಹಬ್ಬಿದ್ದು, ಕೆಲ ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ, ಈ ವರದಿಗಳು ಆಧಾರ ರಹಿತವಾಗಿವೆ ಎಂದು ಹೇಳಿರುವ ಸಂಪುಟ ಕಾರ್ಯದರ್ಶಿಯವರು, ವರದಿಗಳನ್ನು ತಿರಸ್ಕರಿಸಿದ್ದಾರೆ ಎಂದು ಪಿಐಬಿ ಸೋಮವಾರ ಬೆಳಿಗ್ಗೆ ತಿಳಿಸಿದೆ.