*ಹೆಣ್ಣು ಕಂಡ ನಿರ್ದಯಿ ಜಗತ್ತು*

0
755

ಸೌದಿ,  ಮನುಷ್ಯ ತನ್ನ ಜೀವನದಲ್ಲಿ ಪಾಲಿಸಬೇಕಾದ ಮರ್ಯಾದೆಗಳು, ಶಿಷ್ಠಾಚಾರಗಳು ಮತ್ತು ನೀತಿ ನಿಯಮಗಳು ದೇವಾಜ್ಞೆಯ ಮೂಲಕ ಬಂದಾಗ ಅದನ್ನೇ ಧರ್ಮವೆನ್ನಲಾಯಿತು. ವಾಸ್ತವದಲ್ಲಿ ಧಾರ್ಮಿಕ ಶಿಕ್ಷಣಗಳು ದೇವಾದೇಶಗಳೇ ಆಗಿರುತ್ತದೆ.

ಕಷ್ಟಕಾಲದಲ್ಲಿ ಮನುಷ್ಯ ಧರ್ಮದ ಆಸರೆ ಪಡೆಯುತ್ತಾನೆ. ಮತ್ತು ತನ್ನ ಸಮಸ್ಯೆಗಳಿಗೆ ಪರಿಹಾರವನ್ನರಸುತ್ತಾ ಧರ್ಮದ ಕದ ತಟ್ಟುತ್ತಾನೆ. ಆದರೆ ಸ್ತ್ರೀಯ ಪಾಲಿಗೆ ಧರ್ಮವೂ ಬಿಸಿಲ್ಗುದುರೆಯಾಗಿ ಮಾರ್ಪಡುತ್ತದೆ. ದೈವಿಕ ಮಾರ್ಗದರ್ಶನದಿಂದ ಹಳಿತಪ್ಪಿದ ಧರ್ಮಗಳು ಅಂದು ಅಸ್ತಿತ್ವದಲ್ಲಿದ್ದುವು. ಯಹೂದಿಧರ್ಮವು ಮಹಿಳೆಗೆ ತನ್ನೊಡಲಲ್ಲಿ ಆಶ್ರಯ ಕೊಡಲು ವಿಫಲವಾಗಿತ್ತು. ಆದ್ದರಿಂದಲೇ ಪುರುಷ ಪ್ರಧಾನ ಯಹೂದಿ ಸಮಾಜದಲ್ಲಿ ಒಂದು ಹೆಣ್ಣಿಗೆ ತನ್ನ ಸಹೋದರ ಸಮಾನ ಸ್ಥಾನವನ್ನು ಪಡೆಯುವುದು ಅಸಾಧ್ಯವಾಗಿತ್ತು.

ಪ್ರೀತಿಯ ಪ್ರತೀಕವೆಂದೇ ನಂಬಲಾಗುವ ಕ್ರೈಸ್ತ ಧರ್ಮದಲ್ಲೂ ಮಹಿಳೆಯ ಪಾಡು ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೆಣ್ಣಿನ ಪಾಲಿಗೆ ಕ್ರೂರಿಯಾಗಿ ಬಿಡುತ್ತಿದ್ದ ಇವರು ಅವಳನ್ನು ಅವಹೇಳಿಸುವ ಮತ್ತು ಅವಮಾನಿಸುವ ಮಾತುಗಳನ್ನು ಧಾರ್ಮಿಕ ಗ್ರಂಥಗಳಲ್ಲೇ ಬರೆದಿಟ್ಟಿದ್ದರು ಉದಾಹರಣೆಗೆ “ಮನುಷ್ಯನು ಈ ಭೂಮಿಗೆ ಬರುವಂಥ ಶಾಪಗ್ರಸ್ಥ ಸನ್ನಿವೇಶಕ್ಕೆ ಹೆಣ್ಣೇ ಕಾರಣಕರ್ತಳು ಆದ್ದರಿಂದ ಅವಳಿಗೆ ನಾಚಿಕೆಪಡಲು ಕೇವಲ ಇದೊಂದೇ ಕಾರಣ ಸಾಕು. ಎಂದು ಬೈಬಲ್ ನಲ್ಲಿ ಬರೆದಿಡಲಾಗಿತ್ತು. ಅದೇ ಪ್ರಕಾರ ಕ್ರೈಸ್ತ ಧರ್ಮ ಕೇಂದ್ರಗಳು
“ಸ್ತ್ರೀ, ಪುರುಷನಂತೆ ದೇವಾರಾಧನೆ ಮಾಡ ಬಹುದೇ? ”
“ಅವಳು ಸ್ವರ್ಗ ಪ್ರವೇಶಿಸುವಳೇ?”
“ಆಕೆ ಮನುಷ್ಯಾತ್ಮವನ್ನು ಹೊಂದಿರುವಳೇ?” …….. ಎಂಬಿತ್ಯಾದಿ ಪ್ರಶ್ನೆಗಳನ್ನು ಚರ್ಚಾವಿಷಯಗಳನ್ನಾಗಿಸಿ ಕೊಂಡಿತ್ತು.
ಹೆಣ್ಣಿಗೆ ಕೇಳಿ ಯಾ ಹೇಳಿ ಸಂಭ್ರಮಿಸುವಂಥದ್ದೇನೂ ಹಿಂದೂ ಧರ್ಮದಲ್ಲೂ ಇರಲಿಲ್ಲ. ಪುರುಷನೇ ಇಲ್ಲಿ ಸಮಾಜವನ್ನು ಆಳುತ್ತಿದ್ದನು. ಪುರುಷನಿಗೆ ಮಾತ್ರ ಇಲ್ಲಿ ಪ್ರಾಧಾನ್ಯತೆ ಇತ್ತು.

ಋಗ್ವೇದದಲ್ಲಿ ಉಲ್ಲೇಖವಾಗಿರುವಂತೆ…
ಹೇ ಉದಾರಿ ಇಂದ್ರನೇ ! ನೀನು ಈಕೆಗೆ ಸಂತಾನ ಭಾಗ್ಯವನ್ನು ಕೊಡು ಮತ್ತು ಈಕೆಯನ್ನು ಸುಮಂಗಲಿಯಾಗಿಸು. ನೀನು ಈಕೆಯನ್ನು ದಶಪುತ್ರರ ಮಾತೆಯಾಗಿಸು. ಮತ್ತು ಈಕೆಯ ಪತಿಯನ್ನು ಹನ್ನೊಂದನೇ ಪುರುಷನಾಗಿ ಮಾಡು. [ಋಗ್ವೇದ ಮಂಡಲ 10, ಸೂಕ್ತ 85, ಮಂತ್ರ 45]
ಹೇ ಪಿತೃಗಣ ! ನನಗೆ ಒಂದು ಮಗುವನ್ನು ಕರುಣಿಸು, ಕಮಲಗಳಿಂದ ಹೊದಿಸಲ್ಪಟ್ಟ (ಸುಂದರ ಬಾಲಕ) ಈತನನ್ನು ನೀನು ಪೋಷಿಸು . (ಹೀಗಾದರೆ) ಆತ (ಪ್ರಥ್ವಿ ಯ ಮೇಲೆ ಒಂದು ವೀರ ) ಪುರುಷನಾಗಿ ಬಾಳುವನು [ಯಜುರ್ವೇದ ಅಧ್ಯಾಯ 8, ಮಂತ್ರ 5]
ಗಂಡಿಗೆ ಎಷ್ಟು ಆದ್ಯತೆ ಇತ್ತೆಂದರೆ ಪ್ರಾರ್ಥನೆಗಳೂ ಕೇವಲ ಗಂಡು ಮಕ್ಕಳಿಗಾಗಿಯೇ ಮಾಡಲಾಗುತ್ತಿತ್ತು, ಹೆಣ್ಣು ಇಲ್ಲಿ ಅಪ್ರಧಾನವಾಗಿ ಬಿಡುತ್ತಿದ್ದಳು
ಇನ್ನೂ ಒಂದು ಹೆಜ್ಜೆ ಮುಂದೆ ಬಂದು ಸಮಾಜದಲ್ಲಿ ನೆಲೆಯೂರಿದ್ದ ಹೆಣ್ಣಿನ ಕುರಿತ ಮನೋಧರ್ಮವನ್ನೂ ಅವಲೋಕಿಸಿದರೆ ಅಲ್ಲೂ ನಮಗೆ ನಿರಾಶೆ ಕಾಡುತ್ತದೆ.
ವಿವಾಹದ ಕುರಿತು ಚರ್ಚಿಸುತ್ತಾ ಸ್ವಾಮಿ ದಯಾನಂದ ಸರಸ್ವತಿ ಹೇಳುತ್ತಾರೆ
“ಮಗಳನ್ನು ಸಂಸ್ಕೃತದಲ್ಲಿ ದುಹಿತ್ರಿ ಎಂದು ಕರೆಯಲಾಗಿದೆ. (ದು = ದೂರ+ ಹಿತ್ = ಒಳಿತು, ಹಿತ) ಏಕೆಂದರೆ ಹೆಣ್ಣೊಬ್ಬಳನ್ನು ದೂರ ದೇಶದ ಅಥವಾ ಅದೇ ದೇಶದ ದೂರ ಪ್ರದೇಶದ ಗಂಡಸಿನೊಂದಿಗೆ ಮದುವೆ ಮಾಡಿ ಕೊಡುವುದರಿಂದ ಹಿತಗಳಿಸಬಹುದು.
“ವಧುವಿನ ಮನೆಯವರು ಪತಿಯ ಮನೆಯಿಂದ ದೂರ ಇರದಿದ್ದರೆ, ಆಕೆಯ ಪೋಷಕರು ಬಡವರಾಗುವ ಸಾಧ್ಯತೆ ಇದೆ, ಏಕೆಂದರೆ ಆಕೆ ತನ್ನ ಹೆತ್ತವರನ್ನು ಭೇಟಿಯಾಗಲು ಬಂದಾಗೆಲ್ಲಾ ಆಕೆಗೆ ಉಡುಗೊರೆಯಾಗಿ ಏನಾದರೂ ನೀಡಬೇಕಾಗುತ್ತದೆ. ” [ಸತ್ಯಾರ್ಥ ಪ್ರಕಾಶ ಅಧ್ಯಾಯ 4, ದೂರದ ಮತ್ತು ಸಮೀಪದ ಮದುವೆ, ಪುಟ 85 ಪ್ರಯೋಜನಗಳು ಮತ್ತು ದುಷ್ಪರಿಣಾಮಗಳು]

ಋಗ್ವೇದ ಮಂಡಲ 8, ಸೂಕ್ತ 33, ಮಂತ್ರ 17, ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ “ಇಂದ್ರ ಸ್ವತಃ ಹೇಳಿದನು : ” ಮಹಿಳೆಯ ಮನಸ್ಸು ಶಿಸ್ತುಬದ್ಧವಾಗಿರುವುದಿಲ್ಲ. ಆಕೆಯ ಬುದ್ಧಿ ಕಡಿಮೆ ತೂಕದ್ದಾಗಿರುತ್ತದೆ .”
ಇನ್ನೊಂದು ಕಡೆ ಹೀಗೆ ಉಲ್ಲೇಖಿಸಲಾಗಿದೆ.
“ಮಹಿಳೆಯೊಂದಿಗೆ ಯಾವುದೇ ಸ್ನೇಹ ಸಾಧ್ಯವಿಲ್ಲ. ಆಕೆಯದ್ದು ಕತ್ತೆಕಿರುಬನ ಮನಸ್ಸು ” [ಋಗ್ವೇದ, 10/95/15]
ಕೃಷ್ಣ ಯಜುರ್ವೇದ ಹೇಳುತ್ತದೆ:
“ಮಹಿಳೆಯರು ಶಕ್ತಿ ಹೊಂದಿಲ್ಲವಾದ್ದರಿಂದ. ಅವರು ಆಸ್ತಿಯಲ್ಲಿ ಪಾಲು ಪಡೆಯಬಾರದು. ದುಷ್ಟರೊಂದಿಗೂ ಅವರು ಬಲ್ಮೆಗುಂದಿದ ಶೈಲಿಯಲ್ಲಿ ಮಾತನಾಡುತ್ತಾರೆ.” [ಕೃಷ್ಣ ಯಜುರ್ವೇದ 6. 5. 8. 2]
“ಒಂದು ಪತ್ನಿ ತನ್ನ ಪತಿಯ ಆಸ್ತಿಯಲ್ಲಿ ಯಾವುದೇ ಹಕ್ಕು ಪಡೆಯುವುದಿಲ್ಲ. ಅವಳು ಸ್ವತಃ ಸಂಪಾದಿಸಿದ ಸೊತ್ತು ಅವಳದ್ದಾಗಿರದೆ ಆಕೆಯ ಪತಿಯೇ ಅದಕ್ಕೆ ಒಡೆಯನಾಗಿರುತ್ತಾನೆ.” [ಮನು ಸ್ಮೃತಿ ಅಧ್ಯಾಯ 8, ಶ್ಲೋಕ 416]
ಸೋದರ ಇಲ್ಲದೆ ಹುಡುಗಿಯನ್ನು “ಅಭ್ರತರ್” ಎಂದು ಕರೆಯಲಾಗುತ್ತಿತ್ತು ಮತ್ತು ಒಂದು ಹುಡುಗಿಯನ್ನು ಮದುವೆಯಾಗದಂತೆ ತಡೆಯಲು ಇದು ಕಾರಣವಾಗುತ್ತಿತ್ತು.
ಅಥರ್ವ ವೇದ, ಹೇಳುತ್ತದೆ.
“ಮಲಿನ ರಕ್ತನಾಳ ಹೊಂದಿದ ಅವಿವಾಹಿತ ತರುಣಿಯರು, ಕೆಂಬಣ್ಣದ ನಿಲುವಂಗಿಗಳಲ್ಲಿ ಋತುಸ್ರಾವದ ಅವಧಿಯನ್ನು ಕಳೆಯುವವರು ಇನ್ನು ನಿಶ್ಚಲವಾಗಬೇಕು, ಸೋದರರಿಲ್ಲದ ಹುಡುಗಿಯರಂತೆ {ಕಾಂಡ 1, ಸೂಕ್ತ 17, ಮಂತ್ರ 1 } (ಯಾವ ಪ್ರಕಾರ ಸೋದರರಿಲ್ಲದ ಹುಡುಗಿಯರು ಮನೆಯಿಂದ ಹೊರಗೆ ಹೋಗುವುದಿಲ್ಲವೋ ಅದೇ ಪ್ರಕಾರ ಕನ್ಯೆಯರ ರಕ್ತ ಕೂಡ ಹೊರಗೆ ಬರಕೂಡದು)
ಪ್ರಾಚೀನ ಭಾರತೀಯ ಬಾಷಾ ಶಾಸ್ತ್ರದ ಪ್ರಮುಖ ಗ್ರಂಥವಾಗಿರುವ “ನಿರುಕ್ತ” ದಲ್ಲಿ ಇದರ ವಿವರಣೆ ಹೀಗೆ ನೀಡಲಾಗಿದೆ. (ಅವರು ಸಹೋದರರಿಲ್ಲದ ಮಹಿಳೆಯರಂತೆ, ಸಂತಾನೋತ್ಪತ್ತಿಗೆ ಸಂಬಂಧಿಸಿದ ಮಾರ್ಗ ಅವರಿಗೆ ನಿಷೇಧಿಸಲಾಗಿದೆ, (ಸ್ತ್ರೀ ಮತ್ತು ವೈದಿಕ ಗ್ರಂಥ)
ಇಂತಹ ಶೋಚನೀಯ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಿಳೆ ಜೀವನೋತ್ಸಾಹವನ್ನು ಕಳಕೊಂಡು ಚಲಿಸುವ ಶವವಾಗಿ ಬಿಟ್ಟಿದ್ದಳು. ಸಮಾಜದಲ್ಲಿ ಹೆಣ್ಣಿಗೆ ಯಾವುದೇ ಬೆಲೆಯಿರಲಿಲ್ಲ. ಆದರೆ ಹಠಾತ್ತನೆ ಎಲ್ಲವೂ ಬದಲಾಗಿ ಬಿಡುತ್ತದೆ. ಆರನೇ ಶತಮಾನದಲ್ಲಿ ಅರಬ್ ದೇಶದಲ್ಲಿ ಜನಿಸಿದ ಮುಹಮ್ಮದ್(ಸ) ಎಂಬ ವ್ಯಕ್ತಿಯು ಶೋಷಿತ ಹೆಣ್ಣಿನ ಪಾಲಿಗೆ ಆಪದ್ಬಾಂಧವನಾಗಿ ಮೂಡಿಬರುತ್ತಾರೆ ಮತ್ತು ಅವಳ ನಿಸ್ತೇಜ ಶರೀರದಲ್ಲಿ ಜೀವನೋತ್ಸಾಹವನ್ನು ತುಂಬುತ್ತಾರೆ. ಸಕಲ ಮಾನವರಿಗೆ ಒಂದು ಅನುಗ್ರಹೀತ ಮತ್ತು ಅನುಕೂಲವಾದ ಜೀವನವ್ಯವಸ್ಥೆಯನ್ನು ಹೊತ್ತು ತಂದ ಇವರು ಹೆಣ್ಣುವಿರೋಧಿ ಸಮಾಜದ ವಿರುದ್ಧ ಸೊಂಟ ಕಟ್ಟಿ ನಿಲ್ಲುತ್ತಾರೆ. ನೋಡುನೋಡುತ್ತಲೇ ಜೀವನದ ಸಕಲ ರಂಗದಲ್ಲೂ ಹೆಣ್ಣಿನ ಸಂಚಲನೆಯುಂಟಾಗುತ್ತದೆ. ಹೆಣ್ಣು ಸಮಾಜದ ಈ ಕ್ರಾಂತಿ ಇಡೀ ಮಾನವ ಸಮುದಾಯವನ್ನೇ ಬೆರಗಾಗಿಸಿತ್ತು. ತಾಯಿ,ಪತ್ನಿ,ಸಹೋದರಿ ಮತ್ತು ಮಗಳೆಂಬ ನೆಲೆಯಲ್ಲಿ ಪ್ರತಿಷ್ಠಿತ ಹಾಗೂ ಗೌರವಾನ್ವಿತ ಸ್ಥಾನಗಳನ್ನಲಂಕರಿಸಿದ ಆಕೆ ಕ್ರಾಂತಿಕಾರೀ ಕಾಯಕಲ್ಪವನ್ನು ಹೊಂದುತ್ತಾಳೆ.
“ಸ್ತ್ರೀ ಮನುಷ್ಯಾತ್ಮ’ಹೊಂದಿರುವಳೇ? “ಎಂದು ಚರ್ಚೆ ನಡೆಯುತ್ತಿದ್ದ ಕಾಲದಲ್ಲಿ ಮನುಕುಲ ವಿಮೋಚನೆಗಾಗಿ ಅವತೀರ್ಣಗೊಂಡ ಪವಿತ್ರ ಕುರ್ಆನ್ ಆಕೆ ಇಸ್ಲಾಮೀ ಸಮಾಜದಲ್ಲಿ ಹೇಗೆ ಪುರುಷ ಸಮಾನಳಾಗಿ ಸ್ಥಾನ ಪಡೆಯುತ್ತಾಳೆ ಎಂಬುದನ್ನು ಈ ರೀತಿ ವಿವರಿಸುತ್ತದೆ.
“ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಪರಸ್ಪರ ಆಪ್ತರು ಮತ್ತು ಸಂರಕ್ಷಕ ರಾಗಿರುತ್ತಾರೆ. ಅವರು ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹ್ ಹಾಗೂ ಅವನ ದೂತರನ್ನು ಅನುಸರಿಸುತ್ತಾರೆ. ನಿಜವಾಗಿ ಇವರೇ ಅಲ್ಲಾಹನ ಕೃಪೆಗೆ ಅರ್ಹರಾಗಿರುವವರು. ನಿಶ್ಚಯವಾಗಿಯೂ ಅಲ್ಲಾಹ್ ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ.” (ಅಧ್ಯಾಯ 9 ಸೂಕ್ತ 71)
ಪುರುಷ ಪ್ರಧಾನ ಸಮಾಜದಲ್ಲಿ ಅವಹೇಳನ ಮತ್ತು ಅಪಮಾನಕ್ಕೆ ತುತ್ತಾಗಿ ಮಂಕಾಗಿ ಹೋಗಿದ್ದ ಮಹಿಳೆಯ ಮುಖದಲ್ಲಿ ಇದನ್ನು ಕೇಳಿ ಜೀವಕಳೆ ಮೂಡಿಬರುತ್ತದೆ. ಒಂದು ಸಮಾಜವು ಸುಸ್ಥಿತಿಯಲ್ಲಿರಬೇಕಾದರೆ ಪುರುಷನೆಷ್ಟು ಹೊಣೆಗಾರನೋ ಅಷ್ಟೇ ಮಹಿಳೆ ಯೂ ಹೊಣೆಗಾರಳಾಗಿದ್ದಾಳೆ ಎಂದು ಪವಿತ್ರ ಕುರ್ಆನಿನ ಈ ಸೂಕ್ತವು ಸುವ್ಯಕ್ತವಾಗಿ ಹೇಳುತ್ತದೆ.
ಸ್ತ್ರೀ ಪುರುಷರಿಬ್ಬರೂ ಬೇರ್ಪಡಿಸಲಸಾಧ್ಯವಾದ ಅಂಗವಾಗಿದ್ದಾರೆ. ಮಾನವೀಯ ನೆಲೆಯಲ್ಲೂ, ಶಾರೀರಿಕವಾಗಿಯೂ ಸ್ತ್ರೀಯನ್ನು ಪುರುಷನೊಂದಿಗೆ ಬೆಸೆದು ಇಸ್ಲಾಂ ಅವರಿಬ್ಬರ ಸಂಬಂಧವನ್ನು ಗಟ್ಟಿಯಾಗಿಸಿತು. ಗಂಡು ಮತ್ತು ಹೆಣ್ಣು ಎಂಬ ಎರಡು ಜೀವಗಳಿಂದಲೇ ಸಕಲ ಮಾನವರನ್ನು ಸೃಷ್ಟಿಸಲಾಗಿದೆ ಎಂದು ಇಸ್ಲಾಂ ಒತ್ತಿ ಹೇಳಿತು.
“ಮಾನವರೇ, ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿದೆವು. ತರುವಾಯ, ನೀವು ಪರಸ್ಪರ ಗುರುತಿಸಲಿಕ್ಕಾಗಿ ನಿಮ್ಮನ್ನು ವಿಭಿನ್ನ ಸಮುದಾಯಗಳಾಗಿ ಹಾಗೂ ವಿವಿಧ ಕುಲಗಳಾಗಿ ರೂಪಿಸಿದೆವು. ಯಥಾರ್ಥದಲ್ಲಿ ನಿಮ್ಮ ಪೈಕಿ ಅತಿ ಹೆಚ್ಚು ಧರ್ಮನಿಷ್ಠನಾಗಿರುವವನೇ ಅಲ್ಲಾಹನ ಬಳಿ ಗೌರವಾರ್ಹನಾಗಿರುತ್ತಾನೆ. ನಿಶ್ಚಯವಾಗಿ ಅಲ್ಲಾಹ್ (ಎಲ್ಲವನ್ನೂ) ಬಲ್ಲವನೂ, ಅರಿವು ಉಳ್ಳವನೂ ಆಗಿರುತ್ತಾನೆ.” (ಪವಿತ್ರ ಕುರಾನ್ : ಅಧ್ಯಾಯ 49 ವಚನ 13 )
ಇದು ಸ್ತ್ರೀಯ ಪುರುಷನೊಂದಿಗಿರುವ ವಂಶಿಕ ಸಂಬಂಧಕ್ಕೆ ಕುರ್ಆನ್ ನೀಡಿದ ಬಲವಾದ ಪುರಾವೆಯಾದರೆ ಮಾನವೀಯ ನೆಲೆಯಲ್ಲೂ ಅವಳು ಪುರುಷನಿಗೆ ಸಮಾನವಾಗಿದ್ದಾಳೆಂದು ಈ ರೀತಿ ಪ್ರತಿಪಾದಿಸುತ್ತದೆ.
“ಮಾನವರೇ, ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದ ನಿಮ್ಮ ಒಡೆಯನಿಗೆ ನಿಷ್ಠರಾಗಿರಿ. ಅವನು ಅದೇ ಜೀವದಿಂದ ಅದರ ಎಣೆಯನ್ನೂ ಸೃಷ್ಟಿಸಿದನು ಮತ್ತು ಅವೆರಡರಿಂದ ಅನೇಕಾನೇಕ ಪುರುಷರನ್ನೂ ಸ್ತ್ರೀಯರನ್ನೂ (ಲೋಕದಲ್ಲೆಲ್ಲಾ) ಹಬ್ಬಿದನು. ಯಾವ ಅಲ್ಲಾಹನ ಹೆಸರಲ್ಲಿ ನೀವು ಪರಸ್ಪರ ಹಕ್ಕುಗಳನ್ನು ಕೇಳುತ್ತೀರೋ ಅವನಿಗೆ (ಸದಾ) ಅಂಜಿರಿ ಹಾಗೂ ಕುಟುಂಬ ಸಂಬಂಧಗಳನ್ನು ಕೆಡಿಸುವುದರಿಂದ ದೂರವಿರಿ. ಅಲ್ಲಾಹ್ ನಿಮ್ಮ ಮೇಲೆ ಸದಾ ಕಣ್ಣಿಟ್ಟಿರುವನು (ಎಂಬುದನ್ನು ಮರೆಯಬೇಡಿ).” (ಪವಿತ್ರ ಕುರ್ ಆನ್ :ಅಧ್ಯಾಯ 4 ವಚನ 1)
ಮನುಷ್ಯ ಪರಂಪರೆ ‘ಒಂದು ಜೀವದಿಂದ ಆರಂಭಗೊಂಡಿತು ಮತ್ತು ಅದೇ ಜೀವದಿಂದ ಹೆಣ್ಣನ್ನೂ ಸೃಷ್ಟಿಸಲಾಯಿತು. ಬಹುಶಃ ಮಹಿಳೆಯ ಶ್ರೇಷ್ಠತೆ ಮತ್ತು ಪುರುಷ ನೊಂದಿಗೆ ಆಕೆಯ ಸಮಾನತೆಯನ್ನು ಪ್ರತಿಪಾದಿಸುವ ಇಷ್ಟೊಂದು ಸುಂದರ ಹಾಗೂ ಸುವ್ಯಕ್ತ ಮಾತು ಬೇರೆಲ್ಲೂ ಲಭಿಸಲಿಕ್ಕಿಲ್ಲ. ನೈಜಧರ್ಮ, ಗಂಡು ಮತ್ತು ಹೆಣ್ಣನ್ನು ಸಮಾನ ಸ್ಥಾನದಲ್ಲಿ ನಿಲ್ಲಿಸಿ ಈ ಶಿಕ್ಷಣಗಳನ್ನು ಬೋಧಿಸುತ್ತದೆ. ಇದಕ್ಕೆ ಪುರಾವೆಯಾಗಿ ಪವಿತ್ರ ಕುರ್ಆನ್ ಹೇಳುತ್ತದೆ ” ಓ ಆದಂ,ನೀನು ಮತ್ತು ನಿನ್ನ ಪತ್ನಿ ಇಬ್ಬರೂ ಇಲ್ಲಿ ಸ್ವರ್ಗದಲ್ಲೇ ವಾಸಿಸಿರಿ. ಇಲ್ಲಿದ್ದು ಎಲ್ಲಿ ಬೇಕಾದರೂ ಏನು ಬೇಕಾದರೂ ಧಾರಾಳವಾಗಿ ತಿನ್ನಿರಿ, ಆದರೆ ಅದೋ ಈ ವೃಕ್ಷದ ಬಳಿ ಮಾತ್ರ ಸುಳಿಯದಿರಿ. ಅನ್ಯಥಾ ಅಕ್ರಮಿಗಳ ಸಾಲಿಗೆ ಸೇರುವಿರಿ.”(ಅಧ್ಯಾಯ :7;ಸೂಕ್ತ :19)
ಈ ಆಜ್ಞಾ ಪಾಲನೆಯಲ್ಲಿ ಎಡವಿದಾಗ ಇಬ್ಬರಿಗೂ ಸಮಾನ ರೂಪದಲ್ಲೇ ಎಚ್ಚರಿಕೆ ನೀಡಲಾಯಿತು.
ಒಂದು ಮನುಷ್ಯ ಸಮಾಜದಲ್ಲಿ ಪುರುಷರಂತೆ ಸ್ತ್ರೀಯರಿಗೂ ಪ್ರತ್ಯೇಕ ಸ್ಥಾನಮಾನ ಹಾಗೂ ಹೊಣೆಗಾರಿಕೆಗಳಿವೆ. ಸಾಮಾಜಿಕ,ಧಾರ್ಮಿಕ ಹಾಗೂ ಜೀವನದ ಸಕಲ ಅನುವದನೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಪುರುಷ ರಂತೆ ಸ್ತ್ರೀಯರೂ ಮಾನ್ಯತೆ ಪಡೆದಿರುತ್ತಾರೆ. ಅಷ್ಟೇಕೆ, ಇಸ್ಲಾಮೀ ಸಮಾಜದಲ್ಲಿ ಅವರೀರ್ವರೂ ಸಂಪೂರ್ಣ ಸಾಮಾಜಿಕ ಹಕ್ಕುಗಳನ್ನು ಪಡೆದಿರುತ್ತಾರೆ. ಸಮಾಜದಲ್ಲಿ ಇವರ ಸ್ವತಂತ್ರ ನಿಲುವನ್ನು ಸ್ಪಷ್ಟ ಪಡಿಸುತ್ತಾ ಪವಿತ್ರ ಕುರಾನ್ ಹೇಳುತ್ತದೆ “ಪ್ರವಾದಿವರ್ಯರೇ , ಸತ್ಯವಿಶ್ವಾಸಿನಿಯರುತಮ್ಮ ಬಳಿಗೆ ಬಂದು ‘‘ತಾವು ಅಲ್ಲಾಹನೊಂದಿಗೆ ಏನನ್ನೂ ಸೇರಿಸೋದಿಲ್ಲ, ಕಳ್ಳತನ ಮಾಡೋದಿಲ್ಲ, ವ್ಯಭಿಚಾರವೆಸಗೋದಿಲ್ಲ, ತಮ್ಮ ಮಕ್ಕಳನ್ನು ವಧಿಸೋದಿಲ್ಲ, ತಮ್ಮ ಕೈಕಾಲುಗಳ ಮುಂದೆ ಯಾವುದೇ ಮಿಥ್ಯಾಪವಾದ ಹುಟ್ಟಿಸಿ ತರೋದಿಲ್ಲ (ವ್ಯಾಖ್ಯಾನಗಾರರು ಈ ವಾಕ್ಯಕ್ಕೆ ಎರಡು ರೀತಿಯ ವಿವರಣೆ ನೀಡಿರುವರು. ಇತರರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವುದು ಅಥವಾ ತಮ್ಮ ಪತಿಯಂದಿರದ್ದಲ್ಲದ ಮಕ್ಕಳನ್ನು ಅವರದ್ದೇ ಎಂದು ನಂಬಿಸೋದು) , ಮತ್ತು ಮಾನ್ಯವಾದ ಯಾವುದೇ ಕಾರ್ಯದಲ್ಲಿ ನಿಮ್ಮ ಆದೇಶವನ್ನು ಮೀರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ, ನೀವು ಅವರ ಪ್ರತಿಜ್ಞೆಯನ್ನು ಸ್ವೀಕರಿಸಿಕೊಳ್ಳಿ ಮತ್ತು ಅವರಿಗಾಗಿ ಅಲ್ಲಾಹನಲ್ಲಿ ಕ್ಷಮಾಯಾಚನೆ ಮಾಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಾಶೀಲನೂ ಕೃಪಾಶೀಲನೂ ಆಗಿರುತ್ತಾ ನೆ. (ಅಧ್ಯಾಯ : 60 ವಚನ :12)

ಸ್ತ್ರೀ ಪರಲೋಕದಲ್ಲಿ ತನ್ನ ಕರ್ಮಫಲವನ್ನೂ ಪುರುಷರಿಗೆ ಸಮನಾಗೇ ಪಡೆಯುವಳು. ಈ ಕುರಿತು ಪವಿತ್ರ ಕುರ್ಆನಿನಲ್ಲಿ ಹೀಗೆ ಹೇಳಲಾಗಿದೆ
“ಅದು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ, ಸತ್ಯವಿಶ್ವಾಸಿಯಾಗಿ ಯಾರು ಸತ್ಕರ್ಮಗಳನ್ನು ಮಾಡುತ್ತಾರೆ ಅವರು ಸ್ವರ್ಗ ಪ್ರವೇಶಿಸುತ್ತಾರೆ. ಎಳ್ಳಷ್ಟೂ ಅವರ ಮೇಲೆ ಅನ್ಯಾಯವಾಗದು”
(ಅಧ್ಯಾಯ 4 ;ಸೂಕ್ತ :124)
ಮಹಿಳೆ ಮತ್ತು ಸಂಪತ್ತು
ರೋಮನ್ ಸಾಮ್ರಾಜ್ಯದ ಆಧಿಪತ್ಯ ಕಾಲದಲ್ಲಿ ಸ್ತ್ರೀಯ, ಸ್ತ್ರೀತನವೇ ಆಕೆಯನ್ನು ಎಲ್ಲ ವಿಧ ಹಕ್ಕುಗಳಿಂದ ವಂಚಿತಳಾಗಿಸುತ್ತಿತ್ತು. ಅರಬ್ ಸಮೇತ ಅನೇಕ ದೇಶಗಳು ಮಹಿಳೆಗೆ ಸಂಪತ್ತಿನ ಮೇಲಿನ ಯಾವುದೇ ತರದ ಅಧಿಕಾರವನ್ನು ನಿರಾಕರಿಸುತ್ತಿದ್ದ ಕಾಲದಲ್ಲಿ ಇಸ್ಲಾಂ ಅವಳಿಗೆ ಸಂಪತ್ತಿನ ಮೇಲೆ ಸಂಪೂರ್ಣ ಅಧಿಕಾರವನ್ನು ನೀಡಿತು. ಇದರಿಂದಾಗಿ ಯಾವುದೇ ಅಡಚಣೆಯಿಲ್ಲದೆ ವ್ಯಾಪಾರ ವಹಿವಾಟು ಮತ್ತು ಸಂಪತ್ತು ಶೇಖರಣೆಯ ಸ್ವಾತಂತ್ರ್ಯ ಮತ್ತು ಅಧಿಕಾರವನ್ನು ಅವರು ಪಡಕೊಂಡಳು. ಯಾವನೇ ಪುರುಷನಿಗೆ (ಸಹೋದರ ಮತ್ತು ಗಂಡ ಸಮೇತ ) ಅವಳ ಅಪ್ಪಣೆಯಿಲ್ಲದೆ ಅವಳ ಸಂಪತ್ತನ್ನು ಬಳಸಿಕೊಳ್ಳುವ ಅಥವಾ ಖರ್ಚು ಮಾಡುವ ಅಧಿಕಾರ ವಿರಲಿಲ್ಲ. ಮಹಿಳೆ ಆಸ್ತಿ ಹಕ್ಕಿನಿಂದ ಸಂಪೂರ್ಣ ವಂಚಿತಳಾಗಿದ್ದಳು. ಆದರೆ ಇಸ್ಲಾಂ ಅವಳಿಗೆ ತನ್ನ ಪೂರ್ವಿಕರು ಬಿಟ್ಟು ಹೋದ ಸಂಪತ್ತಿನಲ್ಲಿ (ಆಸ್ತಿ) ಪಾಲು ಪಡೆಯುವ ಹಕ್ಕನ್ನು ನೀಡಿತು. ಈ ನಿಟ್ಟಿನಲ್ಲಿ ಪವಿತ್ರ ಕುರ್ಆನ್ ಹೇಳುತ್ತದೆ.” ಮಾತಾಪಿತರೂ ಆಪ್ತ ಬಂಧುಗಳೂ ಬಿಟ್ಟು ಹೋದ ಸಂಪತ್ತಿನಲ್ಲಿ ಪುರುಷರಿಗೆ ಪಾಲಿದೆ. ಮಾತಾಪಿತರೂ ಆಪ್ತ ಬಂಧುಗಳೂ ಬಿಟ್ಟು ಹೋದ ಸಂಪತ್ತಿನಲ್ಲಿ ಸ್ತ್ರೀಯರಿಗೂ ಪಾಲಿದೆ. ಕಡಿಮೆ ಇರಲಿ ಅಥವಾ ಹೆಚ್ಚಿರಲಿ ಈ ಪಾಲು (ಅಲ್ಲಾಹನ ಕಡೆಯಿಂದ )ನಿಶ್ಚಿತವಾಗಿದೆ ”
(ಅಧ್ಯಾಯ 4 ;ಸೂಕ್ತ :7)
ಅಜ್ಞಾನ ಕಾಲದಲ್ಲಿ ಆಕೆ ತನ್ನ ವಿವಾಹ ಧನ (ವಧು ದಕ್ಷಿಣೆ) ದಿಂದಲೂ ವಂಚಿತಳಾಗುತ್ತಿದ್ದಳು. ತಂದೆ,ಸಹೋದರ ಅಥವಾ ಗಂಡ ಅದನ್ನು ಆಕ್ರಮಿಸಿ ಕೊಳ್ಳುತ್ತಿದ್ದನು. ಆದರೆ ಇಸ್ಲಾಂ ಅವಳ ಈ ಹಕ್ಕನ್ನೂ ನೀಡಿತು.”ಮತ್ತು ನೀವು
(ವಿವಾಹವಾಗ ಬಯಸುವ) ಸ್ತ್ರೀಯರಿಗೆ ಅವರ ವಿವಾಹಧನವನ್ನು ಸಂತೋಷದಿಂದಲೇ ನೀಡಿ. ಒಂದು ವೇಳೆ ಅವರು ಸ್ವಇಚ್ಛೆಯಿಂದ ಅದರಿಂದೇನಾದರೂ ನಿಮಗೆ ಬಿಟ್ಟುಕೊಟ್ಟರೆ ಅದನ್ನು ನಿಶ್ಚಿಂತರಾಗಿ ಸಂತೋಷದಿಂದಲೇ ಸವಿಯಿರಿ” (ಅಲ್ ಕುರ್’ಆನ್ : ಅಧ್ಯಾಯ 4 ಸೂಕ್ತ :೪)

~~ ಈಜಾಝುದ್ದೀನ್ ಉಮರಿ

LEAVE A REPLY

Please enter your comment!
Please enter your name here