ದೆಹಲಿ ಹಿಂಸಾಚಾರದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಪತ್ರಕರ್ತರಿಂದ ಪ್ರತಿಭಟನೆ

0
191

ಬೆಂಗಳೂರಿನ ಪ್ರೆಸ್‌ ಕ್ಲಬ್‌ ಎದುರು ಜಮಾಯಿಸಿದ ಪತ್ರಕರ್ತರು, ದೇಶಾದ್ಯಂತ ಪತ್ರಕರ್ತರಿಗೆ ಸಮರ್ಪಕ ರಕ್ಷಣೆ ನೀಡುವಂತೆ ಗೃಹ ಸಚಿವ ಅಮಿತ್‌ ಶಾರವರಿಗೆ ಬರೆದಿರುವ ಪತ್ರವನ್ನು ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಅನೇಕ ಪತ್ರಕರ್ತರ ಮೇಲೆ ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆ. ಕೇವಲ ತಮ್ಮ ಪತ್ರಕರ್ತರ ವೃತ್ತಿ ಮಾಡುತ್ತಿರುವಾಗಲೇ ಅವರ ಮೇಲೆ ದಾಳಿ ಮಾಡುವುದು ಹೇಡಿತನದ ಕೆಲಸವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮದ ಸದಸ್ಯರು ವೃತ್ತಿಯಲ್ಲಿರುವಾಗ ಯಾವುದೇ ಸ್ವಂತ ಅಭಿಪ್ರಾಯವನ್ನು ಹೊಂದಿರುವುದಿಲ್ಲ. ಅವರು ಏನು ನೋಡುತ್ತಾರೋ ಅದನ್ನೇ ವರದಿ ಮಾಡುತ್ತಾರೆ. ಹಾಗಾಗಿ ಅವರ ಮೇಲೆ ಹಲ್ಲೆ ಮಾಡುವುದು ಸಮಂಜಸವಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಸರ್, ಈ ಮಾಧ್ಯಮ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸುವುದು ಸೇರಿದಂತೆ ಹಲವು ರೀತಿಯ ಕ್ರೂರ ದಾಳಿಗೆ ಒಳಗಾಗಿದ್ದರು ಎಂಬುದು ನಿಮಗೆ ತಿಳಿದಿದೆ. ಅವರಿಗಾದ ಮಾನಸಿಕ ಮತ್ತು ದೈಹಿಕವಾಗಿ ತೀವ್ರತರದ  ಗಾಯಗಳಾಗಿದ್ದರೂ ಸಹ ದೆಹಲಿ ಪೊಲೀಸ್ ಅಧಿಕಾರಿಗಳು ಯಾವುದೇ ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದು ಕೇವಲ ದೆಹಲಿ ಮಾತ್ರವಲ್ಲ, ಮಾಧ್ಯಮಗಳು ದೇಶಾದ್ಯಂತ ಇಂತಹ ಸಂದರ್ಭಗಳನ್ನು ಎದುರಿಸುತ್ತಿವೆ ಮತ್ತು ಬೆಂಗಳೂರು ಇದಕ್ಕೆ ಹೊರತಾಗಿಲ್ಲ ಎಂದು ಪತ್ರಕರ್ತರು ದೂರಿದ್ದಾರೆ.

ಪತ್ರಕರ್ತರಾದ ನಾವು ನಮ್ಮ ಜೀವನ ಮತ್ತು ಕುಟುಂಬಗಳನ್ನು ಪಣಕ್ಕಿಟ್ಟು ಸತ್ಯವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತೇವೆ. ನಾವು ಹೆಮ್ಮೆಯ ದೇಶಭಕ್ತರಾಗಿದ್ದು, ಇತರರು ಮಾಡುವಂತೆಯೇ ಸಮಾಜಕ್ಕೆ ಸಹಾಯ ಮಾಡಲು ನಮ್ಮ ಕೆಲಸವನ್ನು ಮಾಡುತ್ತೇವೆ. ನಮಗೆ ಹೊಡೆಯುತ್ತೇವೆ ಮತ್ತು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕುವುದು ಕೇವಲ ನಮ್ಮ ಧ್ವನಿಯನ್ನು ಹತ್ತಿಕ್ಕಿದಂತೆ ಮಾತ್ರವಲ್ಲ ಅವರು ದೇಶದ ಕತ್ತು ಹಿಸುಕುತ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಹಾಗಾಗಿ ದೆಹಲಿಯ ದಾಳಿಕೋರರ ಮೇಲೆ ಕೇಸು ದಾಖಲಿಸಿ ಕಾನೂನು ರೀತ್ಯಾ ಶಿಕ್ಷೆ ನೀಡಬೇಕೆಂದು ಪತ್ರಕರ್ತರ ಸಮನ್ವಯ ಸಮತಿ ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ವಿಜಯ್‌ ಗ್ರೋವರ್‌, ಮಾಯಾ ಶರ್ಮಾ, ಎಂ.ಎ ಪೊನ್ನಪ್ಪ, ನಿಹಾಲ್‌ ಕಿದ್ವಾಯಿ, ದೀಪ ಬಾಲಕೃಷ್ಣನ್‌ ಮತ್ತು ಸುನೀಲ್‌ ಶಿರಸಂಗಿ ಸೇರಿದಂತೆ ಹಲವು ಪತ್ರಕರ್ತರು ಭಾಗವಹಿಸಿದ್ದರು.

Donate

LEAVE A REPLY

Please enter your comment!
Please enter your name here