ಸಿಂಧನೂರು, ಜ.26: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದವತಿಯಿಂದ 2019-20ನೇ ಸಾಲಿನ ಐರಾವತ ಯೋಜನೆಯಲ್ಲಿ ನಗರದ ಖದರೀಯ ಕಾಲೋನಿಯ ನಿವಾಸಿ ಸಂಗಮೇಶ ಎನ್ನುವವರಿಗೆ ಟ್ಯಾಕ್ಸಿ ವಾಹನ ಮಂಜೂರಾಗಿದ್ದು, ಭಾನುವಾರ ಮಾಜಿ ಸಚಿವ, ಶಾಸಕ ವೆಂಕಟರಾವ್ ನಾಡಗೌಡ ಫಲಾನುಭವಿಗೆ ವಿತರಿಸಿದರು.
ನಂತರ ಮಾತನಾಡಿದ ಅವರು ಸರ್ಕಾರದಿಂದ ಎಸ್ಸಿ, ಎಸ್ಟಿ ಹಾಗೂ ಇತರೆ ಜನಾಂಗದವರಿಗೆ ಸಾಕಷ್ಟು ಯೋಜನೆಗಳು ಜಾರಿಯಾಗಿದ್ದು, ಪ್ರತಿಯೊಬ್ಬರು ಅದರ ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕಾದರೆ ಅಗತ್ಯ ಶ್ರಮವಹಿಸಬೇಕಿದೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ದುಂಬಾಲು ಬಿದ್ದು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಬೇಕು ಅಂದಾಗ ಮಾತ್ರ ಯೋಜನೆಯ ಲಾಭ ದೊರೆಯಲು ಸಾಧ್ಯ. ಖದರೀಯ ಕಾಲೋನಿಯ ಮುಖಂಡ ಅಬ್ಬುಮೇಸ್ತಿç ಹೆಚ್ಚಿನ ಮುತುವರ್ಜಿವಹಿಸಿ ಸಂಗಮೇಶ ಎನ್ನುವವರಿಗೆ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯೆ ಮೆಹರುದ್ದೀಸಾ ಬೇಗಂ, ಜೆಡಿಎಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬುಮೇಸ್ತ್ರಿ, ಮುಖಂಡರಾದ ವೀರಯ್ಯಸ್ವಾಮಿ, ಬಾಬಾ (ಎಸ್ಬಿಐ), ಭಾಷಾಸಾಬ್, ಅಕ್ಬರ್ ಮೇಸ್ತ್ರಿ, ವಿ.ನಾಗರಾಜ, ಅಂಬಾಸ ಸಾವಜಿ, ಬಸವರಾಜ, ಮೆಹಬೂಬ್, ಕಂಠಯ್ಯಸ್ವಾಮಿ, ಅಪ್ಸರ್ಪಾಷಾ ಸೇರಿದಂತೆ ಅನೇಕರು ಇದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಅವರಿಗೆ ಜೆಡಿಎಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬುಮೇಸ್ತ್ರಿ ಹಾಗೂ ವಾರ್ಡಿನ ನಿವಾಸಿಗಳು ಸನ್ಮಾನಿಸಿ ಗೌರವಿಸಿದರು.