ಸಿಂಧನೂರು: ನಿರುದ್ಯೋಗ ಸಮಸ್ಯೆ ಅನುಭವಿಸುತ್ತಿರುವ ಯುವಕರ ಮಾಹಿತಿಯನ್ನು ಕ್ರೂಢಿಕರಿಸಿ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಉದ್ಯೋಗ ನೀಡುವಂತೆ ನೀಡುವಂತೆ ಒತ್ತಾಯಿಸಲು ಯುವ ಕಾಂಗ್ರೆಸ್ ನಿಂದ ರಾಜ್ಯಾದ್ಯಂತ
ರಾಷ್ಟ್ರೀಯ ನಿರುದ್ಯೋಗ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ತಿಳಿಸಿದರು.
ಅವರು ನಗರದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಭಿಯಾನದ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಇದರಿಂದ ಬಡ ಜನರು ಸಾಕಷ್ಟು ಪ್ರಮಾಣದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಪ್ರತಿವರ್ಷ 2ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಭರವಸೆ ನೀಡಿದ್ದರೂ ಇಲ್ಲಿಯವರೆಗೆ ದೇಶದಲ್ಲಿ ಹತ್ತು ಲಕ್ಷ ಉದ್ಯೋಗ ಸಹ ಸೃಷ್ಟಿಯಾಗಿಲ್ಲ. ಪ್ರತಿದಿನ ಉದ್ಯೋಗ ಸಿಗದೆ ಅನೇಕ ಯುವಕರು ಬೀದಿಗೆ ಬಂದಿದ್ದಾರೆ. ಉದ್ಯೋಗ ಸೃಷ್ಟಿ ಬಗ್ಗೆ ಗಮನ ಹರಿಸಿದ ಮೋದಿ ಸರ್ಕಾರ ಧರ್ಮಾಧಾರಿತ ಕಾಯ್ದೆಯನ್ನು ಜಾರಿ ಮಾಡಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ಜನೇವರಿ. 23 ರಿಂದ 28ರವರೆಗೆ ಯುವ ಕಾಂಗ್ರೆಸ್ ನಿಂದ ರಾಷ್ಟ್ರೀಯ ನಿರುದ್ಯೋಗ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬ ನಿರುದ್ಯೋಗ ಯುವಕರು 8151994411 ಈ ನಂಬರ್ ಮಿಸ್ ಕಾಲ್ ಮಾಡುವ ಮೂಲಕ ಅಭಿಯಾನದ ಸದುಪಯೋಗಪಡಿಸಿಕೊಳ್ಳಬೇಕು.
ಅಭಿಯಾನದ ಸಂಪೂರ್ಣ ವರದಿಯನ್ನು ತಯಾರಿಸಿ 28ರಂದು ಜೈಪುರದಲ್ಲಿ ನಡೆಯುವ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗುವುದು. ಅಲ್ಲಿ ರಾಜ್ಯದ ನಿರುದ್ಯೋಗದಿಂದಿರುವ ಯುವಕರ ಮಾಹಿತಿಯನ್ನು ರಾಹುಲ್ ಗಾಂಧಿ ಪ್ರಕಟಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ತಾಲ್ಲೂಕಾಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮುಖಂಡರಾದ ಇಲಿಯಾಸ್ ಪಟೇಲ್, ನಾಗರಾಜ ಕವಿತಾಳ, ಶಾಹೀನ್, ಖಾಜಾ ಬಡಿಬೇಸ್, ಹನುಮಂತ ಗಿಣಿವಾರ, ಮಹಾಂತೇಶ, ಜಾವೀದ್ ಇತರರು ಇದ್ದರು.