ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಬಾರದ ಲೊಕಕ್ಕೆ ಪಯಣಿಸಿದ್ದಾರೆ. ಕಳೆದ ಒಂಭತ್ತು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೇಜಾವರ ಸ್ವಾಮೀಜಿ ಇವತ್ತು ಪೇಜಾವರ ಮಠದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ‘ಪೇಜಾವರ ಶ್ರೀಗಳು’ ಎಂದೇ ಚಿರಪರಿಚಿತರು. 1931ರ ಏಪ್ರಿಲ್ 27ರ ಸೋಮವಾರದಂದು ಜನಿಸಿದ ವಿಶ್ವೇಶತೀರ್ಥರು, ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೇ ಸುಪುತ್ರ. ಉಡುಪಿಯಿಂದ ಸುಮಾರು 120 ಕಿ.ಮೀ. ದೂರದಲ್ಲಿರುವ ಉಪ್ಪಿನಂಗಡಿ ಸಮೀಪದ ರಾಮಕುಂಜ, ಪೇಜಾವರ ಶ್ರೀಗಳ ಜನ್ಮಸ್ಥಳ. ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಮಣ
ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ರಾಮಕುಂಜದ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲಿ ಮುಗಿಸಿದ ವೆಂಕಟರಮಣಗೆ ಎಂಟು ವರ್ಷ ತುಂಬುತ್ತಿರುವಾಗಲೇ ಸನ್ಯಾಸ ದೀಕ್ಷೆ ನಡೆಯುತ್ತದೆ.
ಇವರ ಮೂಲ ಹೆಸರು ವೆಂಕಟರಮಣ. ರಾಮಕುಂಜದ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಏಳನೆಯ ವಯಸ್ಸಿನಲ್ಲಿ ಗಾಯತ್ರಿಯ ಮಂತ್ರದ ಉಪದೇಶ.
ಉಡುಪಿಯ ಪೇಜಾವರ ಮಠಕ್ಕೆ ತಂದೆ ತಾಯಿಗಳು ಇವರನ್ನು ಕರೆದುಕೊಂಡು ಹೋಗಿದ್ದರು. ಆಗ ಅಲ್ಲಿನ ಸ್ವಾಮೀಜಿ ವಿಶ್ವಮಾನ್ಯ ತೀರ್ಥರು ಈ ಹುಡುಗನನ್ನು ನೋಡಿ ‘ನೀನು ಸ್ವಾಮೀಜಿ ಆಗುತ್ತೀಯ?’ ಎಂದು ಕೇಳುತ್ತಾರೆ.
ಆಗ ಹೌದು ಎಂದು ಆ ಹುಡುಗ ತಲೆಯಾಡಿಸುತ್ತಾನೆ.
ಬಹು ಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು 3-12- 1938 ರಂದು ವೆಂಕಟರಮಣನಿಗೆ ಹಂಪೆಯ ಯಂತ್ರೋದ್ದಾರ ಮುಖ್ಯ ಪ್ರಾಣನ ಸನ್ನಿಧಿಯಲ್ಲಿ ಧೀಕ್ಷೆ ನಡೆಯಿತು. ಪೇಜಾವರ ಪರಂಪರೆಯ 32 ನೇ ಯತಿಯಾಗಿ ಆಚಾರ್ಯ ಮಧ್ವರ ವೇದಾಂತ ಪೀಠವನ್ನೇರಿದರು. ವೆಂಕಟರಮಣ ವಿಶ್ವೇಶ ತೀರ್ಥರಾದರು.
1956 ಜುಲೈ 28 ರಂದು ಟೀಕಾಚಾರ್ಯರ ಪುಣ್ಯ ದಿನದಂದು ಬೆಂಗಳೂರಿನಲ್ಲಿ ಪೂರ್ಣ ಪ್ರಜ್ಞಾ ಪೀಠದ ಸ್ಥಾಪನೆ ಮಾಡಿದರು. 12 ವರ್ಷಗಳ ಕಾಲ ನಿರಂತರ ಶಾಸ್ತ್ರಾಧ್ಯಯನ ನಡೆಸುವ ಗುರುಕುಲದ ಮಾದರಿಯ ನಾಡಿನ ಹೆಮ್ಮೆಯ ಆಧ್ಯಾತ್ಮಿಕ ವಿದ್ಯಾ ಕೇಂದ್ರ. ನೂರಾರು ವಿದ್ವಾಂಸರು ಇಲ್ಲಿ ಕಲಿತು ಖ್ಯಾತರಾಗಿದ್ದಾರೆ