*ಯುವತಿಯರ ಅತ್ಯಾಚಾರ ಕೊಲೆ : ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ*
ಲಿಂಗಸುಗೂರು : ಅಲೆಮಾರಿ ಸಿಂದೋಳಿ ಸಮುದಾಯದ ಯುವತಿಯರನ್ನು ಅತ್ಯಾಚಾರ ಮಾಡಿ ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ನೇತೃತ್ವದಲ್ಲಿ ಸಮುದಾಯದವರು ಪ್ರತಿಭಟನೆ ನಡೆಸಿದರು.
ಸಾಂಪ್ರದಾಯಿಕ ವೇಷ ಧರಿಸಿಕೊಂಡು ರಸ್ತೆಯುದ್ದಕ್ಕೂ ಪ್ರತಿಭಟನಾ ರ್ಯಾಲಿ ನಡೆಸಿದ ಸಿಂಧೋಲಿ ಸಮುದಾಯದವರು, ಜೇಜಮ್ಮ, ಸಿದ್ದಮ್ಮ ಎನ್ನುವ ಯುವತಿಯರು ತಕ್ಕಲಕೋಟೆ ಗ್ರಾಮದ ನಿವಾಸಿಗಳಾಗಿದ್ದು, ಪ್ಲಾಸ್ಟಿಕ್, ಚಿಂದಿಬಟ್ಟೆ ಆಯಲು ತಮ್ಮ ಸಹಪಾಠಿಯೊಂದಿಗೆ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮಕ್ಕೆ ಹೋಗಿದ್ದರು. ಕೆಲಸದ ವೇಳೆ ಅತ್ಯಾಚಾರಿಗಳು ಬಂದು ಇಬ್ಬರು ಯುವತಿಯರ ಅತ್ಯಾಚಾರ ಮಾಡಿ ಕೊಲೆಗೈದು ನದಿಗೆ ಎಸೆದಿದ್ದಾರೆ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕರವೇ ಅಧ್ಯಕ್ಷ ಜಿಲಾನಿ ಪಾಷಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವೇದಿಕೆಯ ಕಾರ್ಯಕರ್ತರು ಸೇರಿ ಸಮುದಾಯದ ಮುಖಂಡರು ಇದ್ದರು.