ರಾಯಚೂರು.ಅ.೦೮- ಕ್ರೀಡಾ ಚಟುವಟಿಕೆಗಳಿಗೆ ಸೌಕರ್ಯ ಒದಗಿಸಬೇಕೇ ಹೊರತು ಅವುಗಳನ್ನು ತಡೆಯುವಂತಹ ಕೆಲಸ ಯಾರಿಂದಲೂ ನಡೆಯಬಾರದೆಂದು ಮಾಜಿ ಶಾಸಕ ಎನ್.ಎಸ್. ಬೋಸರಾಜು ಅವರು ಟಾಂಗ್ ನೀಡಿದರು.
ಅವರಿಂದು ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ವಿಜೇತರಿಗೆ ಬಹುಮಾನ ನೀಡಿ ಮಾತನಾಡಿದರು. ಕ್ರೀಡಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭಾನ್ವಿತರಿಗೆ ವೇದಿಕೆ ದೊರೆಯುವಂತಾಗಬೇಕು. ಜಿಲ್ಲೆಯಲ್ಲಿ ಎಲ್ಲರೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮನೋಭಾವ ಪ್ರದರ್ಶಿಸಬೇಕು. ಇಲ್ಲಿಯ ವ್ಯಾಪಾರಸ್ಥರು ಈ ರಾಜ್ಯ ಮಟ್ಟದ ಕ್ರೀಡೆ ನಿರ್ವಹಿಸಲು ಉದಾರ ಮನಸ್ಸಿನಿಂದ ಸಹಕರಿಸಿದ್ದಾರೆ. ಹಿಂದುಳಿದ ರಾಯಚೂರು ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿಭಾನ್ವಿತ ಕ್ರೀಡಾಪಟು ಮತ್ತು ವ್ಯಾಪಾರಸ್ಥರನ್ನು ಪರಿಚಯಿಸುವ ವೇದಿಕೆಯಾಗಿದೆ.
ಬ್ಯಾಡ್ಮಿಂಟನ್ ಜಿಲ್ಲಾಧ್ಯಕ್ಷ ಬೆಲ್ಲಂ ಕಿರಣ್ ಅವರು ಮತ್ತು ಅವರ ಸಂಗಡಿಗರು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಅವರ ಕಠಿಣ ಪರಿಶ್ರಮದಿಂದ ಐದು ದಿನಗಳ ಪಂದ್ಯಾವಳಿ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ. ಬ್ಯಾಡ್ಮಿಂಟನ್ ಸಂಘದ ರಾಜ್ಯಾಧ್ಯಕ್ಷರಾದ ಮನೋಜಕುಮಾರ ಅವರು ಮಾತನಾಡುತ್ತಾ, ಕೊರೊನಾ ನಂತರ ರಾಜ್ಯ ಮಟ್ಟದ ಪಂದ್ಯಾವಳಿ ರಾಯಚೂರು ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಬ್ಯಾಡ್ಮಿಂಟನ್ನಲ್ಲಿ ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಐದು ದಿನಗಳ ಈ ಕ್ರೀಡಾಕೂಟವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಲಾಗಿದೆಂದು ಅವರು ಪ್ರಶಂಸಿಸಿದರು.