ಸಿಂಧನೂರು.ಅ.7: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅವರು ಅಪಾರದರ್ಶಕತೆಯ ಅಧಿಕಾರ ನಡೆಸುತ್ತಿದ್ದಾರೆ. ಸಂಘದ ಕಾರ್ಯಚಟುವಟಿಕೆಗಳ ಲೆಕ್ಕಪತ್ರ ಕೇಳಿದರೆ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಸಂಘದ ನಿರ್ದೇಶಕ, ಶಿಕ್ಷಕ ರಾಜೇಂದ್ರ ಕುಮಾರ್ ಆರೋಪಿಸಿದ್ದಾರೆ.
ಅವರು ಈ ಕುರಿತು ದೂರವಾಣಿ ಮೂಲಕ ಹೇಳಿಕೆ ನೀಡಿದ್ದಾರೆ. ಈಚೆಗೆ ನಡೆದ ಸಂಘದ ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ 2010ರಿಂದ 2021ನೇ ಸಾಲಿನವರೆಗೆ ಸಂಘದ ಲೆಕ್ಕ ಪತ್ರ ಹಾಗೂ ಆಡಿಟ್ ವರದಿ ಕಾಪಿ ನೀಡುವಂತೆ ಲಿಖಿತ ರೂಪದಲ್ಲಿ ಮನವಿ ಮಾಡಿದಾಗ್ಯೂ, ನನ್ನ ಮನವಿಗೆ ಕ್ಯಾರೆ ಎಂದಿಲ್ಲ. ಲೆಕ್ಕ ಪತ್ರ ನೀಡುವುದಿಲ್ಲ ಎಂದು ಏರುಧ್ವನಿಯಲ್ಲಿ ಉಡಾಫೆ ಉತ್ತರ ನೀಡಿದ್ದಾರೆ. ಜೊತೆಗೆ ಎಲ್ಲಾ ನಿರ್ದೇಶಕರ ಮುಂದೆ ನನಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾರೆ ಎಂದು ಆಪಾದಿಸಿದರು.
ಸಂಘದ ಅಧ್ಯಕ್ಷರಾಗಿ ಎಲ್ಲಾ ನಿರ್ದೇಶಕರನ್ನು ಜೊತೆಗೂಡಿಸಿಕೊಂಡು ಅಧಿಕಾರ ನಡೆಸಬೇಕು. ನಿರ್ದೇಶಕರಿಗೆ ಬೆಲೆ ಇಲ್ಲದಂತೆ ಏಕಪಕ್ಷಿಯವಾಗಿ ಆಡಳಿತ ನಡೆಸುತ್ತಿದ್ದಾರೆ. ಈ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೂ ತಂದು ದೂರು ನೀಡಲಾಗಿದೆ ಎಂದರು.