ದಲಿತ ಮಹಿಳೆ ಬರ್ಬರ ಹತ್ಯೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ

ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತಾಳಿರುವುದು ಇಂತಹ ಘಟನೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ

0
89

ದಲಿತ ಮಹಿಳೆ ಬರ್ಬರ ಹತ್ಯೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹ
ಸಿಂಧನೂರು.ಅ.7: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಹಾಳ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಪೆಟ್ರೋಲ್ ಹಾಕಿ ಬೆಂಕಿಹಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಗೃಹ ಸಚಿವರಿಗೆ ಗುರುವಾರ ಮನವಿ ರವಾನಿಸಲಾಯಿತು.

ದಲಿತ ಮಹಿಳೆಯ ಮನೆಗೆ ನುಗ್ಗಿ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಮುಂದಾಗಿರುವುದು ಮತ್ತು ಮಹಿಳೆ ಪ್ರತಿರೋಧಿಸಿದಾಗ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ವಿಕೃತಿ ಮೆರೆದಿರುವ ಘಟನೆ ಇಡೀ ಯಾದಗಿರಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ದಲಿತ ಮಹಿಳೆಯರಿಗೆ ಮನೆಯಲ್ಲಿಯೇ ರಕ್ಷಣೆಯಿಲ್ಲವೆಂದರೆ ಪೊಲೀಸ್ ಇಲಾಖೆ, ರಾಜ್ಯ ಸರಕಾರ ಏನು ಮಾಡುತ್ತಿವೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ದಲಿತರ ಮೇಲೆ ಸಾಲು ಸಾಲು ದೌರ್ಜನ್ಯ ಘಟನೆಗಳು ನಡೆದಿವೆ. ದುಷ್ಕøತ್ಯ ನಡೆಸಿದವರನ್ನು ಹಾಗೂ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತಾಳಿರುವುದು ಇಂತಹ ಘಟನೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ವಾಹನ ಹರಿಸುವ ಮೂಲಕ ರೈತರನ್ನು ಹಾಡಹಗಲೇ ಕೊಲೆ ಮಾಡಿರುವುದು ಕೇಂದ್ರದ ಬಿಜೆಪಿ ಸರಕಾರದ ರೈತದ್ರೋಹಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ದಲಿತಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ನಾಗರಾಜ್ ಪೂಜಾರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ದಲಿತರ ಮೇಲಿನ ದೌರ್ಜನ್ಯ, ಕೊಲೆ, ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳು ಮಿತಿಮೀರಿವೆ. ಯಾದಗಿರಿ ಜಿಲ್ಲೆಯಲ್ಲಿನ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಕೊಲೆ ಘಟನೆ, ಕೊಪ್ಪಳ ಜಿಲ್ಲೆಯ ಮೀಯಾಪುರದಲ್ಲಿ ದಲಿತ ಬಾಲಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಪೆÇೀಷಕರಿಗೆ ದಂಡ ಹಾಕಿದ ಘಟನೆ, ಕಾರಟಗಿ ಸಮೀಪದ ನಾಗನಕಲ್ ಗ್ರಾಮದ ಗುಡಿಯ ಒಳ ಹೋಗಿದ್ದಕ್ಕೆ ದಲಿತ ವ್ಯಕ್ತಿಗೆ ದಂಡ ವಿಧಿಸಿದ ಪ್ರಕರಣ, ಅನ್ಯ ಕೋಮಿನ ಯುವತಿಯನ್ನು ಪ್ರೇಮಿಸಿದ್ದ ಕಾರಣಕ್ಕೆ ಕನಕಗಿರಿ ತಾಲೂಕಿನ ಬರಗೂರು ಗ್ರಾಮದ ದಲಿತ ಯುವಕ ದಾನಪ್ಪನ ಬರ್ಬರ ಹತ್ಯೆ, ಕಕ್ಕರಗೋಳ ಗ್ರಾಮದ ಯುವಕ ರಾಘವೇಂದ್ರ, ಸಿಂಧನೂರು ತಾಲೂಕಿನ ಕುನಟಗಿಯಲ್ಲಿ ಜಮದಗ್ನಿ ಕೊಲೆ ಹೀಗೆ ಸಾಲು ಸಾಲು ದೌರ್ಜನ್ಯ ಘಟನೆಗಳು ನಡೆದಿವೆ. ದುಷ್ಕøತ್ಯ ನಡೆಸಿದವರು ನಾಲ್ಕಾರು ದಿನಗಳ ನಂತರ ಹೊರಬಂದು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇದು ರಾಜ್ಯ ಸರಕಾರದ ದಲಿತದ್ರೋಹಿತನಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿ.ಎಚ್.ಕಂಬಳಿ, ಬಿ.ಎನ್.ಯರದಿಹಾಳ, ಮಹಾದೇವ ಧುಮುತಿ, ನಾಗರಾಜ ಸಾಸಲಮನರಿ, ಗುರುರಾಜ ಮುಕ್ಕುಂದಾ, ಆರ್.ಎಚ್.ಕಲಮಂಗಿ, ಪರಶುರಾಮ ತಿಡಿಗೋಳ, ನಾಗರಾಜ ತುರವಿಹಾಳ, ಚಿಟ್ಟಿಬಾಬು ಬೂದಿಹಾಳ ಕ್ಯಾಂಪ್, ಬಸವರಾಜ ಬೆಳಗುರ್ಕಿ ಸೇರಿದಂತೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here