ಬೆಂಗಳೂರು, ಮಾ.4- ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತ ವಿಶೇಷವಾದ ಚರ್ಚೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಕೋಲಾಹಲ ಸೃಷ್ಟಿಸಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಕಾಗೇರಿ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತ ವಿಶೇಷ ಚರ್ಚೆ ಕೈಗೆತ್ತಿಕೊಳ್ಳಲು ಮುಂದಾದರು.
ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ವಿಷಯವನ್ನು ಸಂವಿಧಾನದ ಯಾವ ನಿಯಮಗಳಡಿ ಚರ್ಚೆ ಕೈಗೆತ್ತಿಕೊಂಡಿದ್ದೀರಿ. ಕಳೆದ ಬಾರಿ ಸದನ ಸಲಹಾ ಸಮಿತಿಯಲ್ಲೇ ಚರ್ಚೆ ನಡೆಸುವುದಾಗಿ ಹೇಳಿದ್ದೀರಿ. ಆದರೆ, ಸಮಯಾವಕಾಶವಿಲ್ಲದ ಕಾರಣ ಈಗ ಕೈಗೆತ್ತಿಕೊಂಡಿದ್ದೀರಿ. ಯಾವ ನಿಯಮಗಳಡಿ ಈ ನಿರ್ಣಯ ತೆಗೆದುಕೊಂಡಿದ್ದೀರಿ. ಸಂವಿಧಾನದಲ್ಲಿ ಇದಕ್ಕೆ ಆವಕಾಶವಿದೆಯೇ, ಕಳೆದ ಆವೇಶನದ ಸಂದರ್ಭದಲ್ಲಿ ಹೇಳಿದ್ದಿರಾದರೂ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಸಭಾಧ್ಯಕ್ಷ ಕಾಗೇರಿ ಅವರು ಸಂವಿಧಾನದ 363ನೆ ನಿಯಮದಡಿ ನನಗಿರುವ ವಿಶೇಷ ಅಕಾರ ಬಳಸಿಕೊಂಡು ಚರ್ಚೆ ಕೈಗೆತ್ತಿಕೊಂಡಿದ್ದೇವೆ. ಹಿಂದೆ ಸಂವಿಧಾನ ಕುರಿತ ಚರ್ಚೆಗೆ ಯಾವ ನಿಯಮ ಬಳಸಲಾಗಿತ್ತೋ ಅದೇ ನಿಯಮದಡಿ ತೆಗೆದುಕೊಂಡಿದ್ದೇವೆ. ಈಗ ವಿಷಯ ಪ್ರಸ್ತಾಪಿಸುತ್ತೇನೆ ಎಂದರು.
ಆಗ ಸಿದ್ದರಾಮಯ್ಯನವರು ನೀವು ಮನಸೋ ಇಚ್ಛೆ ಚರ್ಚೆ ನಡೆಸಲು ಅವಕಾಶವಿಲ್ಲ. ನಿಯಮಗಳ ಪ್ರಕಾರ ನಡೆಯಬೇಕು. ಮೊದಲು ಚರ್ಚೆಯನ್ನು ಯಾವ ಕಾರ್ಯ-ಕಲಾಪಗಳ ಪಟ್ಟಿಯಲ್ಲಿ ಸೇರಿಸಿದ್ದೀರಿ. ಅದಕ್ಕೆ ಅವಕಾಶವಿದೆಯೇ, ಸದನವನ್ನು ನಿಯಮಗಳ ಪ್ರಕಾರ ನಡೆಸಬೇಕು. ನಿಮಗೆ ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲ ಎಂದು ಹೇಳಿದರು. ಆಗ ಸಚಿವ ಮಾಧುಸ್ವಾಮಿ ಅವರು ಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲವೆಂದ ಮೇಲೆ ತಾವು ಯಾವ ರೀತಿ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.