ರಾಯಚೂರು.ಮಾ.02- ವಿಜಯನಗರ ಜಿಲ್ಲೆಯ ಹೊಸಪೇಟೆ ವಕೀಲರಾದ ತಾರಿಹಳ್ಳಿ ವೆಂಕಟೇಶ ಬರ್ಬರ ಹತ್ಯೆ ಖಂಡಿಸಿ, ಪ್ರತಿಭಟನೆ ನಡೆಸಿದ ರಾಯಚೂರು ನ್ಯಾಯವಾದಿಗಳ ಸಂಘವೂ ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಫೆ.27 ರಂದು ಹಾಡುಹಗಲೇ ತಾರಿಹಳ್ಳಿ ವೆಂಕಟೇಶ ಅವರನ್ನು ಬರ್ಬರ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಇದೇ ರೀತಿ ಈ ಹಿಂದೆಯೂ ಸಹ ಅನೇಕ ವಕೀಲರಗಳನ್ನು ಹತ್ಯೆಮಾಡಿದ್ದಲ್ಲದೆ, ವಕೀಲರುಗಳ ಮೇಲೆ ಹಲ್ಲೆ ನಡೆಯುತ್ತಲೇ ಇವೆ. ವಕೀಲರುಗಳು ಅನೇಕ ಪ್ರಜೆಗಳ ಮಾನ, ಆಸ್ತಿ, ಜೀವಗಳನ್ನು ರಕ್ಷಣೆಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಲ್ಲಿ ನಾವು ವಿಫಲರಾಗಿದ್ದೇವೆ.
ನ್ಯಾಯವಾದಿಗಳಿಗೆ ಮಾನ, ಜೀವರಕ್ಷಣೆಯೊಂದಿಗೆ ಆಸ್ತಿ ರಕ್ಷಣೆ ಅಗತ್ಯವಾಗಿದೆ. ವಕೀಲರಿಗೆ ಯಾವುದೇ ಕಾನೂನು ರಕ್ಷಣೆಯಿಲ್ಲದಂತಾಗಿದೆ. ನ್ಯಾಯಾಲಯ ಆವರಣದಲ್ಲಿಯೇ ಈ ರೀತಿಯ ಘಟನೆ ನಡೆದರೇ, ಗತಿಯೇನು. ತೆಲಂಗಾಣ ರಾಜ್ಯದ ವಕೀಲ ದಂಪತಿಗಳಾದ ವಾಮಾನರಾವ್ ಮತ್ತು ನಾಗಮಣಿ ಅವರನ್ನು ಕಾರು ನಿಲ್ಲಿಸಿ, ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ವಕೀಲರ ರಕ್ಷಣೆಗೆ ಕಾಯ್ದೆ ರೂಪಿಸುವಂತೆ ಆಗ್ರಹಿಸಲಾಯಿತು. ಈ ಮೆರವಣಿಗೆಯಲ್ಲಿ ಶಿವಶಂಕರ್, ಪ್ರಕಾಶ, ತಿಮ್ಮಣ್ಣ, ಜಿ.ಟಿ.ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.