ಹೊಸದಿಲ್ಲಿ,06/02/21: ರೈತರ ಬೇಡಿಕೆಗಳನ್ನು ಸರಕಾರ ಈಡೇರಿಸುವ ತನಕ ಪ್ರತಿಭಟನಾನಿರತ ರೈತರು ಮನೆಗಳಿಗೆ ಮರಳುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಇಂದು ಹೇಳಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಗೆ ತಡೆಯೊಡ್ಡುವ ಇಂದಿನ ಮೂರು ಗಂಟೆಗಳ ಚಕ್ಕಾ ಜಾಮ್ ಪ್ರತಿಭಟನೆ ಅಂತ್ಯಗೊಂಡ ನಂತರ ದಿಲ್ಲಿ-ಉತ್ತರಪ್ರದೇಶ ಗಡಿ ಭಾಗದ ಗಾಝಿಪುರ್ ನಲ್ಲಿ ಅವರು ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
“ಪ್ರತಿಭಟನೆ ಅಕ್ಟೋಬರ್ 2ರ ತನಕ ನಡೆಯಲಿದೆ ಹಾಗೂ ಕೇಂದ್ರಕ್ಕೆ ತನ್ನ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲು ಅಲ್ಲಿಯ ತನಕ ಸಮಯವಿದೆ, ಆದರೆ ಬೇಡಿಕೆ ಈಡೇರದೇ ಇದ್ದರೆ ಇನ್ನಷ್ಟು ತೀವ್ರ ಪ್ರತಿಭಟನೆ ನಡೆಸುವ ಕುರಿತು ಯೋಚಿಸಲಾಗುವುದು” ಎಂದು ಅವರು ಹೇಳಿದರು.
“ಸರಕಾರದ ಜತೆ ಒತ್ತಡದ ವಾತಾವರಣದಲ್ಲಿ ನಾವು ಚರ್ಚೆಗಳನ್ನು ನಡೆಸುವುದಿಲ್ಲ,” ಎಂದೂ ಅವರು ಸ್ಪಷ್ಟ ಪಡಿಸಿದರು.