ರಾಯಚೂರು: ಎರಡು ಮಕ್ಕಳಿರುವ ವಿವಾಹಿತ ವ್ಯಕ್ತಿ ಅಪ್ರಾಪ್ತೆಯೊಂದಿಗೆ ಪ್ರೇಮ ಬೆಳೆಸಿ ಇದಕ್ಕೆ ಬಾಲಕಿಯ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಇಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಲಿಂಗಸ್ಗೂರು ತಾಲೂಕಿನ ಪೈದೊಡ್ಡಿ ಎಂಬಲ್ಲಿ ನಡೆದಿದ್ದು ಅಪ್ರಾಪ್ತೆ ಸಾವನಪ್ಪಿದ್ದು, ಎರಡು ಮಕ್ಕಳ ತಂದೆ ನರಸಪ್ಪ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಯರಜಂತಿಯ ನರಸಪ್ಪ ಪೈದೊಡ್ಡಿ ಬಾಲಕಿಯೊಂದಿಗೆ ಪ್ರೇಮವಿತ್ತು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಇವರಿಬ್ಬರು ಪೈದೊಡ್ಡಿ ಬಳಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಬಾಲಕಿ ಸಾವನಪ್ಪಿದ್ದಾಳೆ. ನರಸಪ್ಪನ ಸ್ಥಿತಿ ಗಂಭೀರವಾಗಿದ್ದು, ಲಿಂಗಸಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ಇವರು ತಮ್ಮ ಸಾವಿಗೆ ತಾವೇ ಕಾರಣ ಎಂದು ಬರೆದುಕೊಂಡಿದ್ದಾರೆ.
ಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ನರಸಪ್ಪನಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಇದ್ದಾರೆ. ಇವರಿಬ್ಬರ ನಡುವೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು ಎಂದು ತಿಳಿದುಬಂದಿದೆ.