ಬೆಂಗಳೂರು, ನ.6- ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜೀವವನ್ನು ಪಣ ಕ್ಕಿಟ್ಟು ಜನರಿಗಾಗಿ ಕೆಲಸ ಮಾಡುತ್ತಿರುವ ಮಾರ್ಷ ಲ್ಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ ಮಾಡುವಂತಹ ಕೆಲಸಕ್ಕೆ ಕೈ ಹಾಕಿದರೆ ಪೊಲೀಸರು ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಎಚ್ಚರಿಕೆ ನೀಡಿದರು.
ನಗರದ ಟೌನ್ಹಾಲ್ನಲ್ಲಿಂದು ಬಿಬಿಎಂಪಿ ಮತ್ತು ನಗರ ಪೊಲೀಸ್ ಆಯುಕ್ತಾಲಯಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಈಗಾಗಲೇ ವೈಟ್ಫೀಲ್ಡ್ ಮತ್ತಿತರ ಕಡೆ ಮಾರ್ಷಲ್ಗಳ ಮೇಲೆ ಹಲ್ಲೆ ಮಾಡಿದ್ದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗಿದೆ. ಸಮವಸ್ತ್ರದ ಬಣ್ಣ ಯಾವುದೇ ಇರಲಿ. ನೀವು ಮಾಡುತ್ತಿರುವುದು ಜನರ ಸೇವೆ. ಖಾಕಿಗೆ ಇರುವಷ್ಟೇ ಸುಭದ್ರತೆಯನ್ನು ಮಾರ್ಷಲ್ಗಳಿಗೂ ನೀಡುವುದಾಗಿ ಆಯುಕ್ತರು ಭರವಸೆ ನೀಡಿದರು.
ಮಾರ್ಷಲ್ಗಳ ಕೆಲಸದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದೆ. ಕಾನೂನು ಉಲ್ಲಂಘನೆ ಮಾಡುವ ಮುನ್ನ ಮಾರ್ಷಲ್ಗಳು ಬರುತ್ತಾರೆ ಎಂಬ ಭಯ ಜನರಲ್ಲಿ ಹುಟ್ಟಿದೆ. ಪೊಲೀಸರು ಕೂಡ ಕೊರೊನಾ ನಿಯಂತ್ರಣದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ ಎಂದರು.
ಮಾರ್ಷಲ್ಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಹೈಕೋರ್ಟ್ ಮತ್ತು ರಾಜ್ಯ ಮುಖ್ಯಕಾರ್ಯದರ್ಶಿಯವರು ಸ್ಪಷ್ಟ ಸೂಚನೆ ನೀಡಿದ್ದಾರೆ. ಜನರ ಸುರಕ್ಷತೆ ದೃಷ್ಟಿಯಿಂದ ಬಿಬಿಎಂಪಿ ಮತ್ತು ಪೊಲೀಸರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಸಾರ್ವಜನಿಕರು ಉದ್ದಟತನದ ವರ್ತನೆ ತೋರಿ ಉದ್ದೇಶ ಪೂರ್ವಕವಾಗಿ ಕಿರಿಕಿರಿ ಮಾಡಿದರೆ ಕಾನೂನಿನ ಮೂಲಕ ಉತ್ತರ ಹೇಳಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂಬ ಕಾರಣಕ್ಕಾಗಿ ಸಾರ್ವಜನಿಕರು ಹಗರವಾಗಿ ತೆಗೆದುಕೊಳ್ಳಬಾರದು. ಮುಂದಿನ 2-3 ತಿಂಗಳುಗಳ ಕಾಲ ಈಗಿರುವ ವೇಗದಲ್ಲೇ ಕೆಲಸ ಮಾಡಬೇಕು ಎಂದು ಕಮಲ್ಪಂತ್ ಸಲಹೆ ನೀಡಿದರು.