ಬೆಂಗಳೂರು, ಅ 30 – ರಾಜ್ಯಾದ್ಯಂತ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅ.30ರವರೆಗೆ ರಜೆ ಘೋಷಿಸಿದ್ದ ಸರ್ಕಾರ, ಅ.31ರಂದು ವಾಲ್ಮೀಕಿ ಜಯಂತಿ ಮತ್ತು ನ.1ರಂದು ರಾಜ್ಯೋತ್ಸವವನ್ನು ಕೋವಿಡ್ ಮಾರ್ಗಸೂಚಿ ಅನುಸಾರ ಆಚರಿಸುವಂತೆ ಸೂಚನೆ ನೀಡಿದೆ.
ಕಾರ್ಯಕ್ರಮದಲ್ಲಿ ಇಲಾಖೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮಾತ್ರ ಹಾಜರಿರಬೇಕು. ನ.2ರಿಂದ ಶಾಲೆಗೆ ಶಿಕ್ಷಕರು ಮತ್ತು ಸಿಬ್ಬಂದಿ ಮಾತ್ರ ಶಾಲೆಗೆ ಹಾಜರಾಗಬೇಕು ಎಂದೂ ಇಲಾಖೆ ತಿಳಿಸಿದೆ.
ಜೊತೆಗೆ, ಇಲ್ಲಿಯವರೆಗೆ ವಿದ್ಯಾಗಮ ಯೋಜನೆಯಡಿ ನಡೆಸಿರುವ ತರಗತಿಗಳಲ್ಲಿ ವಿದ್ಯಾರ್ಥಿಗಳಲ್ಲಾದ ಪ್ರಗತಿಯನ್ನು ವಿಶ್ಲೇಷಿಸಿ, ಮುಂದಿನ ಕಲಿಕೆಗೆ ಅವಶ್ಯ ಬೋಧನಾ–ಕಲಿಕಾ ಯೋಜನೆ ರೂಪಿಸಲು ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸದ್ಯ ಡಿಎಸ್ಇಆರ್ಟಿಯ ಯೂಟ್ಯೂಬ್ ಚಾನೆಲ್ ‘ಜ್ಞಾನದೀಪ’ದಲ್ಲಿ ಅಳವಡಿಸಿರುವ ವಿಡಿಯೊಗಳನ್ನು ಹಾಗೂ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳ ಲಾಭ ಪಡೆಯುವಂತೆ ಮತ್ತು ದೀಕ್ಷಾ ಪೋರ್ಟಲ್ ಮೂಲಕ ಕಲಿಕಾ ಸಾಮಗ್ರಿಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದೂ ಹೇಳಿದೆ