ಬೆಂಗಳೂರು, ಅ.25- ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿರುವ ನಟಿ ರಾಗಿಣಿ ಜೊತೆ ನಂಟು ಹೊಂದಿದ್ದ ಕಾಂಗ್ರೆಸ್ ಮುಖಂಡರೊಬ್ಬರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ನಟಿ ರಾಗಿಣಿ ಬಂಧನದ ನಂತರ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರ ಆಪ್ತರನಾಗಿರುವ ಗಿರೀಶ್ ಗದಿಗೆಪ್ಪಗೌಡರ ನಟಿ ರಾಗಿಣಿ ಜೊತೆ ನಂಟು ಹೊಂದಿದ್ದು, ಬೆಳಕಿಗೆ ಬಂದಿತ್ತು.
ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಕೈ ನಾಯಕ ಗದಿಗೆಪ್ಪಗೌಡರನ್ನ ತ್ರೀವ ವಿಚಾರಣೆ ಒಳಪಡಿಸಿದ್ದರು. ಹೀಗಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಗದಿಗೆಪ್ಪಗೌಡರ್ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.
ನಟಿ ರಾಗಿಣಿ ಜೊತೆ ಹೊಂದಿದ ನಂಟು ಹಾಗೂ ಗೋವಾದ ಕ್ಯಾಸಿನೋ ಉದ್ಘಾಟನೆಯನ್ನು ನಟಿ ರಾಗಿಣಿ ನೇರವೇರಿಸಿದ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಗಿರೀಶ್ ಗದಿಗೆಪ್ಪಗೌಡರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೂ ಬಂಧನದ ಭೀತಿಯಿಂದ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.
ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ಗಿರೀಶ್ ಗದಿಗೆಪ್ಪಗೌಡರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಾಮೀನು ನೀಡುವ ಅವಶ್ಯಕತೆ ಇಲ್ಲವೆಂದು ವಾದಿಸಿದ್ದರು. ಆದರೆ ಬಂಧನ ಭೀತಿ ಬಗ್ಗೆ ಗದಿಗೆಪ್ಪಗೌಡರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ ಕೆಲ ಉದಾಹರಣಗಳ ಹಾಗೂ ಸಾಂದರ್ಭಿಕ ಘಟನೆಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನಿರೀಕ್ಷಣಾ ಜಾಮೀನಿನ ಬಗ್ಗೆ ಪ್ರಸ್ತಾಪಿಸಿದ್ದರು.
ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧನ ಮಾಡುವ ಪ್ರಸಂಗ ಎದುರಾದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಆದರೆ ಪ್ರಕರಣ ದಾಖಲಾಗುವ ಮುನ್ನವೇ ಕೈ ನಾಯಕ ಗಿರೀಶ್ ಗದಿಗೆಪ್ಪಗೌಡರ ನಿರೀಕ್ಷಣಾ ಜಾಮೀನು ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.