ಸಿಂಧನೂರು:ಫ.27- ತಾಲ್ಲೂಕಿನ ತುಂಗಭದ್ರಾ ಎಡದಂಡೆ ಕಾಲುವೆ 38,39 ವಿತರಣಾ ಕಾಲುವೆ ವ್ಯಾಪ್ತಿಯ ಗದ್ದೆಗಳಿಗೆ ನೀರು ಹರಿಸುವುದನ್ನು ಇದೇ ಫೆ.28 ರಿಂದ ಮಾರ್ಚ್ 03ರವರೆಗೆ ನಿಲ್ಲಿಸುವ ನಿರ್ಧಾರವನ್ನು ಕೂಡಲೇ ಕೈ ಬಿಟ್ಟು ಪೂರ್ಣ ಪ್ರಮಾಣದಲ್ಲಿ ನೀರು ಒದಗಿಸಬೇಕೆಂದು ರೈತರು ತಹಸೀಲ್ದಾರ ಹಾಗೂ ನೀರಾವರಿ ಇಲಾಖೆಯ ಎಇಇ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಹಿರೇಗೌಡ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ರೈತರ ಬೆಳೆಗಳಿಗೆ ಸಮರ್ಪಕ ನೀರು ನೀಡದೇ ಬೆಳೆಗಳು ಹಾಳಾಗಿ ರೈತ ವಲಯ ಕಂಗಾಲಾಗಿದೆ. ಈಗ ಏಕಾಏಕಿ 28 ರಂದು ನೀರು ಪೂರೈಕೆಯನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದಿಂದ ಆದೇಶ ಹೊರಡಿಸಿದ್ದು ಖಂಡನೀಯವಾಗಿದೆ. ಐಸಿಸಿ ಸಭೆಯ ನಿರ್ಣಯದಂತೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಅಧಿಕಾರಿಗಳು ಗಮನಹರಿಸಿ 38, 39 ಕಾಲುವೆ ವ್ಯಾಪ್ತಿಯ ರೈತರಿಗೆ ನೀರು ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣೇಗೌಡ ಸಾಸಲಮರಿ, ಮಲ್ಲಿಕಾರ್ಜುನ ದಾನಗೌಡ್ರು, ಬಸವರಾಜ ಅಮರಾಪುರ, ಕರಿಯಪ್ಪ ಉಪ್ಪಾರ, ಬಾಲಯ್ಯ ಉಪ್ಪಾರ, ಮಂಜು ಉಪ್ಪಲದೊಡ್ಡಿ, ಚನ್ನಪ್ಪ ಹೊಸಳ್ಳಿ, ಹೊನ್ನೂರಸಾಬ್ ರೌಡಕುಂದಾ ದಳಪತಿ, ಸ್ವಾಮಿ ವಿವೇಕಾನಂದ ಯುವ ವೇದಿಕೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರೌಡಕುಂದ, ಜಾಲಿಹಾಳ ಕ್ಯಾಂಪ್, ರಂಗಾಪುರ ಕ್ಯಾಂಪ್, ಗೋರೆಬಾಳ, ಹೊಸಳ್ಳಿ, ಸಾಸಲಮರಿ ಕ್ಯಾಂಪ್, ಬೂದಿವಾಳ ಕ್ಯಾಂಪ್, ಹಂಚಿನಾಳ ಕ್ಯಾಂಪ್ ರೈತರು ಇದ್ದರು.