ರಾಯಚೂರು,ಫೆ.27- ಜೀವನದ ಮೌಲ್ಯಗಳನ್ನು ಅರಿತು ಒಳ್ಳೆಯ ನಾಗರೀಕರಾಗಿ ಕುಟುಂಬದ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಇನ್ನೊಬ್ಬರಿಗೆ ಮಾರ್ಗದರ್ಶಕರಾಗಿ ಜೀವನ ನಡೆಸಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಆರ್. ಅಂದಾನಿ ಅವರು ಹೇಳಿದರು.
ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಫೆ.26 ರಂದು ವಿಚಾರಣಾಧೀನ ಖೈದಿಗಳ ಮನ ಪರಿವರ್ತನೆ ಮತ್ತು ಹಾಲಿನ ಡೈರಿಯ ಖಾಲಿ ಪಾಕೆಟ್ನಲ್ಲಿ, ಅಡುಗೆ ಎಣ್ಣೆಯ ಖಾಲಿಪಾಕೆಟ್, ನೀರಿನ ಖಾಲಿ ಬಾಟಲ್ಗಳಲ್ಲಿ 20 ಸಾವಿರ ಗಿಡ ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬದುಕಿನಲ್ಲಿ ಅರಿಯದೇ ತಪ್ಪು ಮಾಡುವುದು ಸಹಜ ಆದರೆ ಪದೇ ಪದೇ ತಪ್ಪು ಮಾಡಿದರೆ ಅಪರಾಧ ವಾಗುತ್ತದೆ ಹಾಗಾಗಿ ತಪ್ಪು ತಿದ್ದಿಕೊಂಡು ಓದುವದು, ಬರೆಯುವದು, ಧ್ಯಾನ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಹೊಸ ಜೀವನ ರೂಪಿಸಿಕೊಂಡು ಹೊರಗೆ ಹೋಗಬೇಕೆಂದು ಹೇಳಿದರು.
ಗಿಡ,ಮರಗಳು ಬೆಳೆಸುವದು, ಪರಿಸರದ ಸ್ವಚ್ಚತೆ ಕಾಪಾಡುವದು ಮುಖ್ಯವಾಗಿದೆ ಗಿಡ ಇಲ್ಲದಿದ್ದರೇ ನಾವು ಜೀವಿಸಲಾಗುವದಿಲ್ಲ ಹಾಗಾಗಿ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸುವಲ್ಲಿ ಗಮನಹರಿಸಬೇಕಾಗಿದೆ. ಈ ಸಂದರ್ಭದಲ್ಲಿ ಎರಡು ಸಾವಿರ ಗಿಡಗಳನ್ನು ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪರಿಸರ ಜಾಗೃತಿ ಮತ್ತು ಕಾನೂನು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಜೈಲರ್ ಅಬ್ದುಲ್ ಶುಕೂರ್, ಕೇದಾರನಾಥ, ಕಾರಾಗೃಹ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.