ಸಿಂಧನೂರು:ಭಾವೈಕ್ಯತೆ ಪ್ರತೀಕವಾಗಿರುವ ತಾಲ್ಲೂಕಿನ ಗೋಮರ್ಸಿ ಗ್ರಾಮದಲ್ಲಿ ಮಂಗಳವಾರ ಹಜರತ್ ಮೀರಾಂ ಸೈಯದ್ ಶಾಹ ಶಂಶುದ್ದೀನ್ ಖಾದ್ರಿ ಅಲ್ ಮಾರೂಫ್ ಶಂಮಸ್ಸ್ – ಎ- ದಖನ್ (ರ.ಆ) ಅವರ 314 ನೇ ಉರುಸು ಅದ್ದೂರಿಯಿಂದ ಜರುಗಿತು.
ಸೋಮವಾರ ರಾತ್ರಿಯಿಂದಲೇ ಉರುಸಿನ ಪ್ರಯುಕ್ತ ಝಂಡಾ ನೆರವೇರಿಸುವ ಕಾರ್ಯಕ್ರಮ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಬೆಳಗಿನ ಜಾವ ಶಂಶುದ್ದೀನ್ ಖಾದ್ರಿಯವರ ವಂಶಸ್ಥರಿಂದ ಸಂದಲ್ ( ಗಾಂಧಿ) ಕಾರ್ಯಕ್ರಮ ನೆರವೇರಿಸುವ ಮೂಲಕ
ಉರುಸಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಹೂ ಮಾಲಿ, ಸಕ್ಕರೆ ಅರ್ಪಿಸಿ ಭಕ್ತಿಯನ್ನು ಸಮರ್ಪಿಸಿದರು.
ನಂತರ ಶಂಶುದ್ದೀನ್ ಖಾದ್ರಿ ವಂಶಸ್ಥ ಸರ್ಕಾರ್ ಪಾಷಾ ಸಜ್ಜಸದೆ ನಶೀನ್ ಗೋಮರ್ಸಿ ಮಾತನಾಡಿ, ಕರುನಾಡು ಶಾಂತಿ ಬೀಡು. ಹಿಂದೂ- ಮುಸ್ಲಿಂ ಬಾಂಧವರು ಸದಾ ಸಹೋದರತೆ ಭಾವನೆಯಿಂದ ಜೀವನ ನಡೆಸಬೇಕು ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಕನ್ನಡ ವಾಜ್-ಓ- ಬಯಾನ್ ಕಾರ್ಯಕ್ರಮವನ್ನು ಹುಬ್ಬಳ್ಳಿ ಮುಹಮ್ಮದ್ ರಮಝಾನ್ ರಝವಿಯವರಿಂದ ಪ್ರವಚನ ನಡೆಯಿತು.
ಉರುಸು ಪ್ರಯುಕ್ತ ಮಧ್ಯಾಹ್ನ ನಡೆದ ರಾಜ್ಯ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪಟುಗಳು ಭಾರವಾದ ಕಲ್ಲುಗಳನ್ನು ಒಂದೇ ಕೈಯಿಂದ ಎತ್ತುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದರು.
ರಾತ್ರಿ ಕಲಬುರಗಿಯ ಸೂಫಿ ಗಾಯಕ ಮೊಹಮ್ಮದ್ ಅಕ್ಬರ್ ಖಾಸಿಂ ಕವ್ವಾಲರಿಂದ ಕವ್ವಾಲಿ ಕಾರ್ಯಕ್ರಮ ಜನಮನಸೂರೆಗೊಂಡಿತು.