JNU ಹಿಂಸಾಚಾರ : ಆಯಿಷೆ ಘೋಷ್ ಸೇರಿ 9 ಮಂದಿ ಶಂಕಿತರೆಂದ ಪೊಲೀಸರು.. ನನ್ನ ಮೇಲಿನ ಹಲ್ಲೆಗೆ ಸಾಕ್ಷಿಯಿದೆಯೆಂದ ಆಯಿಷೆ ಘೋಷ್…

0
195

ಕ್ಯಾಂಪಸ್ ಹಿಂಸಾಚಾರ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷೆ ಆಯಿಷೆ ಘೋಷ್, ಇತರ 8 ಮಂದಿ ಶಂಕಿತರೆಂದು ದೆಹಲಿ ಪೊಲೀಸರು ಗುರುತಿಸಿದ್ದಾರೆ. ಅವರ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.

ಪೊಲೀಸರು ದಾಖಲಿಸಿರುವ ಮೂರು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಭಾನುವಾರ ಸಂಜೆ ಮುಸುಕುಧಾರಿ ಗೂಂಡಾಗಳಿಂದ ಥಳಿಸಲ್ಪಟ್ಟ ವಿದ್ಯಾರ್ಥಿ ನಾಯಕಿ ಘೋಷ್, ಮಧ್ಯಾಹ್ನ 3.45 ರ ಸುಮಾರಿಗೆ ಪೆರಿಯಾರ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಗುಂಪುಗಳ ಭಾಗವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೆಎನ್‌ಯುನಲ್ಲಿ ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತಂಡದ ಮುಖ್ಯಸ್ಥರಾಗಿರುವ ಪೊಲೀಸ್ ಉಪ ಆಯುಕ್ತ ಜಾಯ್ ಟ್ರಿಕಿ, ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡುವುದರ ಆಧಾರದ ಮೇಲೆ ಇಲ್ಲಿಯವರೆಗೆ ಗುರುತಿಸಲಾಗಿರುವ ಶಂಕಿತರಿಗೆ ನೋಟಿಸ್ ನೀಡುತ್ತೇವೆ ಮತ್ತು ಅವರು ಅಲ್ಲಿಗೆ ಏಕೆ ಹೋದರೆಂದು ವಿವರಣೆ ನೀಡಬೇಕು ಎಂದಿದ್ದಾರೆ.

ಟ್ರಿಕಿ ಒಂಬತ್ತು ಶಂಕಿತರು ಯಾವ ರಾಜಕೀಯ ವಿಭಾಗಕ್ಕೆ ಸೇರಿದ್ದಾರೆ ಎಂಬುದನ್ನು ವಿವರಿಸಿಲ್ಲ. ಆದರೆ ಜೆಎನ್‌ಯು ವಿದ್ಯಾರ್ಥಿ ಸಂಘದ ಭಾಗವಾಗಿದ್ದ ಎಡ ಗುಂಪುಗಳಿಗೆ ಸೇರಿದ್ದಾರೆ ಎಂದು ಉಚ್ಚರಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ಗೂ, ಶಂಕಿತರಿಗೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿಲ್ಲ.

ಪೆರಿಯಾರ್‌ ಹಾಸ್ಟೆಲ್‌ನಲ್ಲಿ ಮಧ್ಯಾಹ್ನ 3.45 ರ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯ ನಂತರ, ಸಂಜೆ 7 ಗಂಟೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಬರಮತಿ ಟಿ-ಪಾಯಿಂಟ್‌ನಲ್ಲಿ ಶಾಂತಿ ಸಭೆ ನಡೆಸುತ್ತಿದ್ದರು. ಆಗ ಜನರ ಗುಂಪೊಂದು ಬಂದು ಮೊದಲು ಈ ಸಭೆಯಲ್ಲಿ ಜನರೊಂದಿಗೆ ವಾಗ್ವಾದಕ್ಕೆ ಇಳಿದು ನಂತರ ಸಬರಮತಿ ಹಾಸ್ಟೆಲ್‌ಗೆ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿತು ಎಂದಿದ್ದಾರೆ.

ಪೆರಿಯಾರ್ ಹಾಸ್ಟೆಲ್‌ನಲ್ಲಿ ಹಿಂದಿನ ದಿನ ನಡೆದ ದಾಳಿಯಂತೆ, ಸಬರಮತಿ ಹಾಸ್ಟೆಲ್‌ನಲ್ಲಿ ಈ ಗುಂಪು ನಿರ್ದಿಷ್ಟ ಕೊಠಡಿಗಳನ್ನು ಗುರಿಯಾಗಿಸಿ ಹಲ್ಲೆ ಮಾಡಿದೆ ಎಂದು ಟ್ರಿಕಿ ಹೇಳಿದರು. ಮುಖವಾಡದ ದಾಳಿಕೋರರಲ್ಲಿ ಜೆಎನ್‌ಯು ವಿದ್ಯಾರ್ಥಿಗಳು ಇದ್ದರು ಎಂದಿದ್ದಾರೆ.

ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ತೋರಿಸಲು ಸಾಕ್ಷಿಗಳಿವೆ : ಆಯಿಷೆ ಘೋಷ್

ಕ್ಯಾಂಪಸ್ ದಾಳಿಯ ಶಂಕಿತರಲ್ಲಿ ದೆಹಲಿ ಪೊಲೀಸರು JNUSU ಅಧ್ಯಕ್ಷೆ ಆಯಿಷೆ ಘೋಷ್ ಅವರ ಹೆಸರು ಪ್ರಸ್ತಾಪಿಸಿದ ಕೆಲವೇ ಕ್ಷಣಗಳಲ್ಲಿ, ಪತ್ರಿಕಾಗೋಷ್ಠಿ ನಡೆಸಿದ ಆಯಿಷೆ ಘೋಷ್, ನನ್ನ ಮೇಲೆ ಹಲ್ಲೆ ನಡೆದಿರುವುದನ್ನು ತೋರಿಸಲು ತನ್ನ ಬಳಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.

ಜನವರಿ 5 ರಂದು, ಮುಸುಕುಧಾರಿ ಪುರುಷರು ಮತ್ತು ಮಹಿಳೆಯರು ಜೆಎನ್‌ಯು ಕ್ಯಾಂಪಸ್‌ಗೆ ಪ್ರವೇಶಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೊಡೆದಿದ್ದರು. ಆಗ ತೀವ್ರ ಪೆಟ್ಟು ತಿಂದ ಘೋಷ್ ರಕ್ತ ಸುರಿಸುತ್ತಲೇ ಆಸ್ಪತ್ರೆ ಸೇರಿದ್ದರು.

“ತಾನು ಯಾವುದೇ ಹಲ್ಲೆಯಲ್ಲಿ ಭಾಗಿಯಾಗಿಲ್ಲ ಎಂದು ಪುನರುಚ್ಚರಿಸಿರುವ ಘೋಷ್, ದೆಹಲಿ ಪೊಲೀಸರು ತಮ್ಮ ವಿಚಾರಣೆ ನಡೆಸಲಿ, ನನ್ನ ಮೇಲೆ ಹೇಗೆ ಹಲ್ಲೆ ನಡೆಸಲಾಗಿದೆ ಎಂಬುದನ್ನು ತೋರಿಸಲು ನನ್ನ ಬಳಿ ಪುರಾವೆಗಳಿವೆ ”ಎಂದು ಹೇಳಿದ್ದಾರೆ.

ಪೊಲೀಸರು ಆಕೆಯ ಹೆಸರನ್ನು ಶಂಕಿತರ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮೊದಲು ಪೊಲೀಸರು ಅದಕ್ಕೆ ಸೂಕ್ತ ದಾಖಲೆಗಳನ್ನು, ವಿಡಿಯೋಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ದುರುದ್ದೇಶಪೂರ್ವಕವಾಗಿ ಪೊಲೀಸರು ನಡೆಸುಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

“ಈ ದೇಶದ ಕಾನೂನು ವ್ಯವಸ್ಥೆ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ, ಅದು ನ್ಯಾಯಯುತವಾಗಿ ತನಿಖೆ ನಡೆಸುತ್ತದೆ ಮತ್ತು ನನಗೆ ನ್ಯಾಯ ಸಿಗುತ್ತದೆ. ಆದರೆ ದೆಹಲಿ ಪೊಲೀಸರು ಏಕೆ ಪಕ್ಷಪಾತವಾಗಿ ವರ್ತಿಸುತ್ತಿದ್ದಾರೆ? ನಾನು ಕೊಟ್ಟ ದೂರಿನಡಿ ಇನ್ನು ಏಕೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಪ್ರಶ್ನಿಸಿರುವ ಅವರು, ನಾನು ಯಾವುದೇ ಹಲ್ಲೆ ನಡೆಸಿಲ್ಲ” ಎಂದು ಹೇಳಿದ್ದಾರೆ.

ದೆಹಲಿ ಪೊಲೀಸರ ಈ ದಬ್ಬಾಳಿಕೆಗೆ ಹೆದರುವುದಿಲ್ಲ. ವಿದ್ಯಾರ್ಥಿಗಳು ಮುಂದೆಯೂ ಸಹ ಚಳುವಳಿಯನ್ನು ಶಾಂತಿಯುತವಾಗಿ ಮತ್ತು ಪ್ರಜಾಪ್ರಭುತ್ವ ರೀತಿಯಲ್ಲಿ ಮುನ್ನಡೆಸುತ್ತಾರೆ ಎಂದು ಯುವ ನಾಯಕಿ ಆಯಿಷೆ ಘೋಷ್‌ ಒತ್ತಿಹೇಳಿದ್ದಾರೆ.

 

LEAVE A REPLY

Please enter your comment!
Please enter your name here