ಮಸ್ಕಿ : ಜ.8- ಕಾರ್ಮಿಕ ಕಾಯ್ದೆಗಳನ್ನು ಕೇಂದ್ರ ಸರಕಾರ ತಿದ್ದುಪಡಿ ಮಾಡುತ್ತಿರುವದನ್ನು ವಿರೋಧಿಸಿ ಟ್ರೇಡ್ ಯುನಿಯಾನ್ ಸೆಂಟರ್ ಆಫ್ ಇಂಡಿಯಾ ಕೇಂದ್ರ ಸಮಿತಿಯಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಸ್ಥಳೀಯ ನಾನಾ ಸಂಘಟನೆಗಳು ಬೆಂಬಲಿಸಿ ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಬುಧವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಿಂದ ಆರಂಭವಾದ ಪ್ರತಿಟನಾ ರ್ಯಾಲಿ ಮೆರವಣಿಗೆ ಹಳೇ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್.ಅಂಭೇಡ್ಕರ್ ಮೂರ್ತಿ ತಲುಪಿತು. ನಂತರ ಮುಷ್ಕರವನ್ನು ಉದ್ದೇಶಿಸಿ ಕೆಜೆಆರ್ಎಸ್ ರಾಜ್ಯ ಸಮಿತಿ ಮುಖಂಡ ಬಿ.ಬಸನಲಿಂಗಪ್ಪ ಮಾತನಾಡಿದರು.
ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ೪೪ ಕಾರ್ಮಿಕ ಕಾನೂನುಗಳನ್ನು ನಾಶಮಾಡಿ “ವೇತನ ಸಂಹಿತೆ “ಮತ್ತು ವೃತ್ತಿ ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ”ಗಳನ್ನು ಅಂಗೀಕರಿಸಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸರ್ಕಾರಗಳು ಜಾರಿ ಮಾಡಿಲ್ಲ. ಸ್ಕೀಂ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಕಾರ್ಮಿಕರಿಗೆ ಸ್ಥಾನಮಾನ ಇದುವರೆಗೂ ನೀಡಿಲ್ಲ. ಬಂಡವಾಳಿಗರ ಪರವಾಗಿ ನೀತಿಗಳನ್ನು ತಂದು, 1925ರ ಟ್ರೇಡ್ ಯೂನಿಯನ್ ಕಾಯ್ದೆಗೆ ತಿದ್ದುಪಡಿ ಮಾಡಿ ಕಾರ್ಮಿಕ ಸಂಘಟನೆಗಳ ವ್ಯಾಖ್ಯಾನ ಮತ್ತು ಮಾನ್ಯತೆ ಪ್ರಕ್ರಿಯೆಯನ್ನು ಬದಲಾಯಿಸಲು ಮೋದಿ ಸರಕಾರ ಹೊರಟಿದೆ ಎಂದರು.
ಬಸವಂತ ಹಿರೇಕಡಬೂರು, ಅಶೋಕ ಮುರಾರಿ, ಗಂಗಪ್ಪ ತೋರಣದಿನ್ನಿ, ಎಂ.ಅನಿಲ್ಕುಮಾರ, ದಸ್ತಗಿರಿಸಾಬ ಮಾತನಾಡಿದರು.
ಹಕ್ಕೋತ್ತಾಯ : ರಾಷ್ಟ್ರೀಯ ಸಮಾನ ಕನಿಷ್ಠ ವೇತನ 21000 ರೂಪಾಯಿ ನಿಗದಿಪಡಿಸಬೇಕು, ಕಾರ್ಪೋರೆಟ್ ಬಂಡವಾಳದ ಪರವಾದ ಮತ್ತು ಕಾರ್ಮಿಕ ವಿರೋಧಿಯಾದ ಕಾರ್ಮಿಕ ಕಾನೂನುಗಳ ಸಂಹಿತೀಕರಣ ವಿರೋಧಿಸಿ, ಎಲ್ಲರಿಗೂ ಸರಕಾರದಿಂದಲೇ 10000 ರೂಪಾಯಿ ಕನಿಷ್ಠ ಖಾತ್ರಿ ಪಿಂಚಣಿ ಜಾರಿಯಾಗಬೇಕು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಶಾಸನಬದ್ದ ಭವಿಷ್ಯನಿಧಿ ಜಾರಿಯಾಗಬೇಕು, ಸಾರ್ವತ್ರಿಕ ಪಡಿತರ ವ್ಯವಸ್ಥೆಗಾಗಿ, ಬೆಲೆ ಏರಿಕೆ ನಿಯಂತ್ರಿಸಬೇಕು, ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಕನಿಷ್ಠ ವೇತನ ಕಾಯ್ದೆ ಜಾರಿಮಾಡಬೇಕು, ರಕ್ಷಣೆ, ರೈಲ್ವೆ, ಬ್ಯಾಂಕ್, ವಿಮೆ ಮುಂತಾದ ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ಮತ್ತು ಖಾಸಗೀಕರಣ ಕೈಬಿಡಬೇಕು, ಗುತ್ತಿಗೆ ಪದ್ಧತಿ ಎಫ್ಟಿಇ, ಎನ್ಇಇಎಂ ಪದ್ಧತಿಗಳ ರದ್ದತಿಗಳನ್ನು ರದ್ದುಪಡಿಸಬೇಕೆಂದು ಹಕ್ಕೋತ್ತಾಯಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಹನುಮಂತ ಭಜಂತ್ರಿ, ಚಾಂದಸಾಬ ಬೆಳ್ಳಿಗಾನೂರು, ಸಿದ್ದು ಮುರಾರಿ, ಆದಪ್ಪ ನಗನೂರು, ಮಕ್ಬುಲ್ ಮೇರನಾಳ, ಮಲ್ಲನಗೌಡ, ದೇವರಾಜ ಮಡಿವಾಳ, ರಮೇಶ ಮೇಸ್ತ್ರಿ, ದುರಗರಾಜ್ ಮುರಾರಿ, ತುಳಜಪ್ಪ, ವಸಂತಕುಮಾರ ವೆಂಕಟಾಪೂರು, ಲಿಂಗರಾಜ, ನಾಗರಾಜ ಸಿರಗುಪ್ಪಿ, ಶಿವಕುಮಾರ ಸೇರಿದಂತೆ ಟಿಯುಸಿಐ, ಸಿಐಟಿಯು, ಕೆವೈಎಫ್ ಮತ್ತು ಎಸ್ಎಫ್ಐ ಕಾರ್ಯಕರ್ತರಿದ್ದರು.