ಮುಂಬೈ, ಡಿ.24-ಕರ್ತವ್ಯ ನಿರ್ವಹಣೆ ವೇಳೆ ದುರುದ್ದೇಶ ಇಲ್ಲದ ನಿರ್ಲಕ್ಷ್ಯತನವು ದುರ್ನಡತೆ ಆರೋಪ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ಶ್ರೀರಕ್ಷೆಯಾಗಿದೆ.
ಬಾಂಬೆ ನ್ಯಾಯಾಲಯದ ನ್ಯಾಯಮೂರ್ತಿಗಳಾದ ರಂಜಿತ್ ಮೋರ್ ಮತ್ತು ಎನ್.ಜಿ. ಜಮಾದಾರ್ ಅವರನ್ನೊಳಗೊಂಡ ಪೀಠ ಕಸ್ಟಮ್ಸ್ ಇಲಾಖೆ ಅಧಿಕಾರಿ ಸತ್ಯೇಂದ್ರಸಿಂಗ್ ಗುಜರ್ ಪ್ರಕರಣದಲ್ಲಿ ಈ ತೀರ್ಪು ನೀಡಿದೆ. ಕರ್ತವ್ಯ ನಿರ್ವಹಣೆ ವೇಳೆ ಯಾವುದೇ ದುರುದ್ದೇಶ ಅಥವಾ ಸ್ವಾರ್ಥವಿಲ್ಲದೆ ನಿರ್ಲಕ್ಷ್ಯ ಮತ್ತು ಕರ್ತವ್ಯಚ್ಯುತಿ ಎಸಗಿದರೆ ಅಥವಾ ತಪ್ಪು ನಿರ್ಧಾರಗಳನ್ನು ಕೈಗೊಂಡರೆ ಅವುಗಳನ್ನು ದುರ್ನಡತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸತ್ಯೇಂದ್ರ ಸಿಂಗ್ ಗುಜರ್ ಅವರು ಕಸ್ಟಮ್ಸ್ ಇಲಾಖೆಯ ಸೀಮಾ ಸುಂಕ ಅಧಿಕಾರಿ. ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟು ಒಂದು ಸರಕು ಸಾಗಾಣೆಗೆ ಅನುಮತಿ ನೀಡಿದ್ದರು. ಈ ಸರಕು ಬೇಬಿಪೌಡರ್ ಮತ್ತು ಮಕ್ಕಳ ಉತ್ಪನ್ನಗಳು ಎಂದು ಮಾಲೀಕರು ಹೇಳಿದ್ದರಾದರೂ ವಾಸ್ತವವಾಗಿ ಅದರ ಒಳಗೆ ಅಂತಾರಾಷ್ಟ್ರೀಯ ಖ್ಯಾತಿ ಕೈಗಡಿಯಾರಗಳ ನಕಲಿ ಮಾಲುಗಳಿದ್ದವು.
ಕರ್ತವ್ಯ ಲೋಪವೆಸಗಿದ್ದಾರೆ ಎಂದು ಕೇಂದ್ರಿಯ ಆಡಳಿತಾತ್ಮಕ ಮಂಡಳಿ ಇವರನ್ನು ದೋಷಿಯಾಗಿಸಿತ್ತು, ಆದರೆ ವಿಚಾರಣೆ ನಡೆಸಿದಾಗ ಇವರು ಯಾವುದೇ ದುರುದ್ದೇಶ ಅಥವಾ ವೈಯಕ್ತಿಕ ಲಾಭಕ್ಕಾಗಿ ಈ ಸರಕಿಗೆ ಅನುಮತಿ ನೀಡಿಲ್ಲ ಎಂದು ದೃಢಪಟ್ಟಿತ್ತು.