ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ 60 ಅರ್ಜಿಗಳ ಮೇಲಿನ ಮೊದಲ ವಿಚಾರಣೆಯಲ್ಲಿ, ವಿವಾದಾತ್ಮಕ ಕಾನೂನಿಗೆ ತಡೆಯಾಜ್ಞೆ ತರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಆದರೆ ಸಂವಿಧಾನವನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಅರ್ಜಿದಾರರಿಗೆ ಉತ್ತರ ನೀಡಬೇಕೆಂದು ಸುಪ್ರೀಂ ಕೇಂದ್ರಕ್ಕೆ ನೋಟಿಸ್ ನೀಡಿದೆ.
ಅಲ್ಲದೇ ಜನವರಿ ಎರಡನೇ ವಾರದೊಳಗೆ ಅರ್ಜಿದಾರರಿಗೆ ಉತ್ತರಿಸಬೇಕೆಂದು ಕೇಂದ್ರಕ್ಕೆ ತಿಳಿಸಿರುವ ಸುಪ್ರೀಂ ಕೋರ್ಟ್, ಈ ಕಾಯ್ದೆಯನ್ನು ತಡೆಹಿಡಿಯಬೇಕೇ ಎಂದು ನಾವು ನೋಡಬೇಕಾಗಿದೆ ಎಂದಿದ್ದು ಜನವರಿ 22 ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯನ್ನು ಆಲಿಸಿದ್ದು, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಅವರು ನ್ಯಾಯಪೀಠದ ಇತರ ನ್ಯಾಯಾಧೀಶಗಳಾಗಿದ್ದಾರೆ.
ಪೌರತ್ವ ನೀಡಲು ಧರ್ಮವು ಆಧಾರವಾಗಿರಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಹೊಸ ಕಾನೂನು, ಸಂವಿಧಾನದ ಮೂಲಭೂತ ರಚನೆಗೆ ವಿರುದ್ಧವಾಗಿದೆ, ಏಕೆಂದರೆ ಅಕ್ರಮ ವಲಸಿಗರನ್ನು ಧರ್ಮದ ಆಧಾರದ ಮೇಲೆ ನಾಗರಿಕರನ್ನಾಗಿ ಒಪ್ಪಿಕೊಳ್ಳುವುದು ಜೀವನ ಮತ್ತು ಸಮಾನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರ್ಜಿಯನ್ನು ಸಲ್ಲಿಸಿದವರಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಟಿಎಂಸಿಯ ಮಹುವಾ ಮೊಹಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಅಸ್ಸಾಂನ ಆಡಳಿತಾರೂಡ BJP ಬಿಜೆಪಿಯ ಮಿತ್ರಪಕ್ಷ ಅಸ್ಸಾಂ ಗಣ ಪರಿಷತ್ ಸೇರಿದ್ದಾರೆ.