ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ವಿಚಾರವಾಗಿ ಇಂದು ಕಂದಾಯ ಸಚಿವ ಆರ್ ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳು ಹೊರತು ಪಡಿಸಿ ರಾಜ್ಯದ ಎಲ್ಲಾ ಕ್ಯಾಂಟೀನ್ ಗಳಿಗೆ ಇಂದಿರಾ ಕ್ಯಾಂಟೀನ್ ಬದಲಿಗೆ “ಮಹರ್ಷಿ ವಾಲ್ಮೀಕಿ ಅನ್ನ ಕುಟೀರ” ಎಂದು ಹೆಸರಿಡಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಯೊಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯ ಕ್ಯಾಂಟೀನ್ ಗೆ ಕಾಂಗ್ರೆಸ್ ಸರ್ಕಾರ ಇಟ್ಟಿರುವ ಹೆಸರನ್ನು ರಾಜ್ಯದ ಬಿಜೆಪಿ ಸರ್ಕಾರ ಬದಲಾವಣೆ ಮಾಡುತ್ತಿರುವ ನಡೆ ಕಾಂಗ್ರೆಸ್ ನಾಯಕರಿಗೆ ಕೆರಳಿಸಿದೆ.
ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ‘ಕ್ಷುಲ್ಲಕ ಕಾರಣಕ್ಕೆ ರಾಜಕಾರಣ ಮಾಡೋದನ್ನು ಬಿಜೆಪಿ ಬಿಡಲಿ, ವಾಲ್ಮೀಕಿ ಬಗ್ಗೆ ನನಗೆ ಗೌರವವಿದೆ, ಅವರ ಹೆಸರಿನಲ್ಲಿ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಲಿ, ಆದರೆ ಅದನ್ನು ಬಿಟ್ಟು ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಗೆ ವಾಲ್ಮೀಕಿ ಹೆಸರು ಇಡಲು ಹೊರಟಿರುವುದು ಸರಿಯಲ್ಲ, ಇದು ಮಹಾಕವಿಗೆ ಮಾಡುವ ಅವಮಾನ, ಬಿಜೆಪಿಯಿಂದ ವಾಲ್ಮೀಕಿ ಹೆಸರು ದುರ್ಬಳಕೆಯಾಗುತ್ತಿದೆ, ಹೆಸರು ಬದಲಾವಣೆ ಮಾಡುವ ಬದಲು ನಿಮ್ಮ ಸಣ್ಣಬುದ್ದಿ ಬದಲಾವಣೆ ಮಾಡಿ’ ಎಂದು ಬಿಎಸ್ವೈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.